ಪುತ್ತೂರು: ಬನ್ನೂರು ಜೈನರಗುರಿ ಸಮೀಪ ಯುವಕರ ಮಧ್ಯೆ ಗಲಾಟೆ ನಡೆದು ಇಬ್ಬರು ಯುವಕರು ತಲವಾರಿನಲ್ಲಿ ಹಲ್ಲೆಗೆ ಯತ್ನಿಸಿ ಪರಾರಿಯಾಗಿರುವುದಾಗಿ ವರದಿಯಾಗಿದೆ.
ಜು.6ರಂದು ರಾತ್ರಿ ಸ್ಥಳೀಯರಾದ ಫಯಾಝ್ ಮತ್ತು ಇನ್ನೋರ್ವ ರಾತ್ರಿ ವೇಳೆ ಅಂಗಡಿ ಬಳಿ ನಿಂತಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ಆರೋಪಿಗಳಾದ ಅಭಿಜಿತ್ ಮತ್ತು ಶರತ್ ಸೇರಿದಂತೆ ಯುವಕರ ಗುಂಪು ಅಲ್ಲಿಗೆ ಆಗಮಿಸಿದ್ದು ಈ ಸಂದರ್ಭ ಕ್ಷುಲ್ಲಕ ವಿಚಾರದಲ್ಲಿ ಅವರೊಳಗೆ ಮಾತಿನ ಚಕಮಕಿ, ಗಲಾಟೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ತಲವಾರು ಝಳಪಿಸಿ ಜೀವ ಬೆದರಿಕೆ ಒಡ್ಡಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯಿಂದಾಗಿ ಸ್ಥಳದಲ್ಲಿ ತುಸು ಹೊತ್ತು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತಾದರೂ ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿ ಸಂಭಾವ್ಯ ಘರ್ಷಣೆಯನ್ನು ತಪ್ಪಿಸಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆನ್ನಲಾಗಿದೆ.