ಬೆಳ್ತಂಗಡಿ : ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಆರೋಪಗಳನ್ನು ಮಾಡಿ ಅವರ ಗೌರವಕ್ಕೆ ಧಕ್ಕೆ ತರುವಂತಹ ಕೆಲಸ ಮಾಡಿದ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಗೆ ಬೆಳ್ತಂಗಡಿ ಕೆಳಗಿನ(ತನಿಖಾ) ನ್ಯಾಯಾಲಯ ಮೂರು ತಿಂಗಳು ಜೈಲು ಶಿಕ್ಷೆ ಜೊತೆಗೆ ನಾಲ್ಕೂವರೆ ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ನೀಡಿತ್ತು.
ನ್ಯಾಯಾಲಯದ ಈ ಆದೇಶವನ್ನು ರದ್ದುಗೊಳಿಸಬೇಕೆಂದು ಕೋರಿ ಸೋಮನಾಥ ನಾಯಕ್ ಅವರು ಬೆಳ್ತಂಗಡಿಯ ಅಪರ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಇದೀಗ ಈ ಅರ್ಜಿಯನ್ನು ನ್ಯಾಯಾಧೀಶರಾದ ಬಿ.ಕೆ.ನಾಗೇಶ್ ಮೂರ್ತಿಯವರು ವಜಾಗೊಳಿಸಿದ್ದಾರೆ. ನ್ಯಾಯಾಲಯವನ್ನು ಹಾಗೂ ಸಮಾಜದ ಗಣ್ಯವಕ್ತಿಗಳನ್ನು ಗೌರವಿಸಲಾಗದ ಮತ್ತು ಆರೋಪದ ಬಗ್ಗೆ ಯಾವುದೇ ಸಾಕ್ಷಿಯನ್ನು ಸಾಬೀತು ಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಛೀಮಾರಿ ಹಾಕಿ ಇಂದು ( ಮಾರ್ಚ್ 22, 2022) ವಜಾಗೊಳಿಸಿದ್ದಾರೆ. ಹೀಗಾಗಿ ಸೋಮನಾಥ ನಾಯಕ್ ಅವರಿಗೆ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಿ ಕೆಳಗಿನ ನ್ಯಾಯಾಲಯ ನೀಡಿದ ಆದೇಶವನ್ನು ಅಪರ ನ್ಯಾಯಾಲಯ ಕೂಡ ಎತ್ತಿಹಿಡಿದಿದೆ.