ಮಂಗಳೂರು: ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡದಿದ್ದಲ್ಲಿ ಪ್ರತಿ ಜಿಲ್ಲೆಯ ಬಿಜೆಪಿ ಶಾಸಕರ ಕಚೇರಿ ಎದುರು ಧರಣಿ ನಡೆಸುವುದಾಗಿ ಶ್ರೀರಾಮ ಸೇನೆ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್, ಕೋವಿಡ್ ನಿಯಮ ಪಾಲಿಸಿ ಮಾಲ್, ಚಿತ್ರಮಂದಿರ, ಚುನಾವಣೆ, ರಾಜಕೀಯ ಸಮಾವೇಶ ನಡೆಸುವಂತೆಯೇ ಗಣೇಶ ಉತ್ಸವ ಆಚರಿಸಲು ಅನುಮತಿ ನೀಡಬೇಕು. ಜನಾಶೀರ್ವಾದ ರಾಜಕೀಯ ಕಾರ್ಯಕ್ರಮಕ್ಕೆ ಇರದ ನಿರ್ಬಂಧ ಗಣಪತಿ ಹಬ್ಬಕ್ಕೆ ಯಾಕೆ ಎಂದು ಅವರು ಪ್ರಶ್ನಿಸಿದರು.
ಹಬ್ಬ ನಿಷೇಧಿಸಿದರೆ ಇದನ್ನೇ ನಂಬಿ ಜೀವನ ಸಾಗಿಸುವ ಸಾವಿರಾರು ಕುಟುಂಬಗಳು ಅತಂತ್ರರಾಗುತ್ತಾರೆ. ನಾಲ್ಕಾರು ತಿಂಗಳುಗಾಲ ಮುಂಚೆಯೇ ಮೂರ್ತಿಕಾರರು ಮೂರ್ತಿಯನ್ನು ತಯಾರಿಸುತ್ತಾರೆ. ಶಾಲಾ ಕಾಲೇಜುಗಳೇ ತೆರೆದಿರುವಾಗ ಗಣೇಶ ಉತ್ಸವಕ್ಕೆ ನಿಷೇಧ ಹೇರಿರುವುದು ಎಷ್ಟು ಸರಿ. ಹೀಗಾಗಿ ನಿರ್ಬಂಧವನ್ನು ತೆರವುಗೊಳಿಸಿ ಹೊಸ ಮಾರ್ಗಸೂಚಿ ಆದೇಶವನ್ನು ಸರಕಾರ ಹೊರಡಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಪ್ರದೀಪ್ ಮೂಡುಶೆಡ್ಡೆ, ಉಪಾಧ್ಯಕ್ಷ ಹರೀಶ್ ಬೊಕ್ಕಪಟ್ಣ, ಸಂಘಟನಾ ಕಾರ್ಯದರ್ಶಿ ಕಿಶೋರ್ ಸನಿಲ್, ನಗರ ಕಾರ್ಯದರ್ಶಿ ವೆಂಕಟೇಶ್ ಪಡಿಯಾರ್ ಉಪಸ್ಥಿತರಿದ್ದರು.