ಚೆನ್ನೈ: ಖಾಸಗಿ ರೆಸಿಡೆನ್ಸಿಯಲ್ ಸ್ಕೂಲ್ ನ 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜನರು ರೊಚ್ಚಿಗೆದ್ದು ಶಾಲೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. 14 ಕ್ಕೂ ಹೆಚ್ಚು ಶಾಲಾ ಬಸ್ ಗಳಿಗೆ ಬೆಂಕಿ ಇಟ್ಟಿದ್ದು, ಟ್ರ್ಯಾಕ್ಟರ್ ಮೂಲಕ ಬಸ್ ಗಳಿಗೆ ಡಿಕ್ಕಿ ಹೊಡೆಸಿ ಹಾನಿ ಮಾಡಿದ್ದಾರೆ.
ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಚಿನ್ನಾ ಸೇಲಂ ಸಮೀಪದ ಕಣಿಯಮೂರ್ ನ ಖಾಸಗಿ ಶಾಲೆಯಲ್ಲಿ ಇಂದು ದಾಂಧಲೆ ನಡೆದಿದೆ.
ಜುಲೈ 13 ರಂದು ವಿದ್ಯಾರ್ಥಿನಿ ನನ್ನ ಸಾವಿಗೆ ಶಿಕ್ಷಕರೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಳು. ಅಂದಿನಿಂದ ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಕೊಡಿಸಬೇಕೆಂದು ಸಣ್ಣ ಮಟ್ಟದ ಪ್ರತಿಭಟನೆ ನಡೆಯುತ್ತಲೇ ಇತ್ತು.
ಇಂದು ಏಕಾಏಕಿ ಆಕ್ರೋಶಗೊಂಡ ವಿದ್ಯಾರ್ಥಿ ಸಂಘಟನೆಗಳು, ಸ್ಥಳೀಯರು ಮತ್ತು ವಿದ್ಯಾರ್ಥಿಗಳು ಶಾಲೆಗೆ ನುಗ್ಗಿ ಹಿಂಸಾಚಾರ ನಡೆಸಿದ್ದಾರೆ. ಶಾಲಾ ಬಸ್ ಗಳು, ಪೊಲೀಸ್ ಬಸ್ ಗಳಿಗೆ ಬೆಂಕಿ ಹಚ್ಚಲಾಗಿದ್ದು, ಡಿಐಜಿ ಸೇರಿದಂತೆ 20 ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ.
ಸ್ಥಳಕ್ಕೆ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ಗೃಹ ಕಾರ್ಯದರ್ಶಿ ಫಣೀಂದ್ರ ರೆಡ್ಡಿ ಮತ್ತು ಡಿಜಿಪಿ ಸೈಲೇಂದ್ರಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.