ಮಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.
ಪಿವಿಎಸ್ ಜಂಕ್ಷನ್ ಬಳಿ
ತೆಂಗಿನಕಾಯಿಯ ಗೆರಟೆ, ಪ್ಲಕಾರ್ಡ್ ಮತ್ತು ಚೆಂಬು ಹಿಡಿದು ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ನವಭಾರತ್ ಸರ್ಕಲ್ ವರೆಗೆ
ಹಗ್ಗ ಕಟ್ಟಿ ಬೈಕ್ ಮತ್ತು ಕಾರನ್ನು ಎಳೆಯುವ ಮೂಲಕ ಪ್ರತಿಭಟಿಸಿದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಮಾಜಿ ಎಂಎಲ್ಸಿ ಕ್ಯಾ. ಗಣೇಶ್ ಕಾರ್ಣಿಕ್ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸೇರಿದಂತೆ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ನವಭಾರತ್ ವೃತ್ತದ ಪೆಟ್ರೋಲ್ ಬಂಕ್ ವರೆಗೆ ವಾಹನಗಳನ್ನು ಹಗ್ಗ ಕಟ್ಟಿ ಎಳೆದು ತಂದ ಬಿಜೆಪಿ ಕಾರ್ಯಕರ್ತರು, ಚೆಂಬುವಿನಲ್ಲಿ ಹಣ ಸಂಗ್ರಹಿಸಿ ವಾಹನಗಳಿಗೆ ಪೆಟ್ರೋಲ್ ಹಾಕಿಸಿದರು.
ಚೆಂಬಲ್ಲಿ ಸಂಗ್ರಹವಾದ ಹಣವನ್ನು ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಕೊಟ್ಟು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ
ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳುವ ಮೂಲಕ ಬೆಲೆ ಏರಿಕೆಯನ್ನು ಖಂಡಿಸಿದರು