ಬಂಟ್ವಾಳ: ಇಲ್ಲಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳದ ವತಿಯಿಂದ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಮನಿಷಾ ವಾಲ್ಮೀಕಿ ಎಂಬ ಯುವತಿಯ ಅತ್ಯಾಚಾರ ಪ್ರಕರಣ ವನ್ನು ಖಂಡಿಸಿ ಬಿ.ಸಿ ರೋಡಿನ ಮಿನಿ ವಿಧಾನಸೌಧ ದ ಮುಂಬಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯನ್ನು ಉದ್ದೇಶಿಸಿ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಪ್ರೊ.ನಾರಾಯಣ ಭಂಡಾರಿ ಮಾತನಾಡಿದರು.
ಸಮಾಜದ ಯುವ ಜನರು ಸಂಸ್ಕಾರವಂತ ಶಿಕ್ಷಣ ಪಡೆದಾಗ ಮಾತ್ರ ಇಂತಹ ಪ್ರಕರಣಗಳು ಕಡಿಮೆಯಾಗುತ್ತದೆ ಹಾಗೂ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಮರುಕಳಿಸಬಾರದೆಂದಿದ್ದರೆ ಕಠಿಣ ಕಾನೂನಿನ ಜಾರಿಯಾಗಬೇಕು ಆಗ ಮಾತ್ರ ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಪ್ರತಿಭಟನೆ ಬಳಿಕ ಅ.ಭಾ.ವಿ.ಪ ವತಿಯಿಂದ ತಹಶೀಲ್ದಾರ್ ಮುಖಾಂತರ ರಾಷ್ಟಪತಿಗಳಿಗೆ ಮನಿಷಾ ವಾಲ್ಮೀಕಿ ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸಬೇಕು ಹಾಗೂ ಅತ್ಯಾಚಾರ ತಡೆಗೆ ಕಠಿಣ ಕಾನೂನಿನ ರಚನೆಯಾಗಬೇಕೆಂದು ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗ ಸಂಚಾಲಕರಾದ ಆಶಿಶ್ ಅಜ್ಜಿಬೆಟ್ಟು,ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಅಖಿಲಾಷ್, ತಾಲೂಕು ಸಂಚಾಲಕರಾದ ಹರ್ಷಿತ್ ಕೊಯಿಲ, ತಾಲೂಕು ಸಹ ಸಂಚಾಲಕರಾದ ದಿನೇಶ್ ಕೊಯಿಲ,ಸಿದ್ದಕಟ್ಟೆ ಘಟಕದ ಅದ್ಯಕ್ಷರಾದ ಗುರುಪ್ರಸಾದ್, ಚೇತನ್ ಒಕ್ಕೆತ್ತೂರು,ಆಕಾಶ್,ಮಹೇಶ್,ಹರ್ಷಿತ್ ಅರಳ,ನಿತಿನ್ ಸಿದ್ದಕಟ್ಟೆ, ತಿಲಕ್ ಶೆಟ್ಟಿ ಪೂಂಜ,ನಾಗರಾಜ್ ಶೆಣೈ,ಅನೀಶ್ ಚೇಳೂರು,ಸುಮಂತ್,ಲಿಖಿತ್ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.