ಬೆಳ್ತಂಗಡಿ: ಉಜಿರೆ ಗ್ರಾಮದ ಗುರಿಪಳ್ಳದಲ್ಲಿ ಇತ್ತೀಚೆಗೆ ಆದಿವಾಸಿ ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ತಪ್ಪಿಸ್ಥರಿಗೆ ಶಿಕ್ಷೆ ಹಾಗೂ ಸಂತ್ರಸ್ತೆಗೆ ನ್ಯಾಯಕ್ಕಾಗಿ ಆಗ್ರಹಿಸಿ ಮೇ.9 ರಿಂದ ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಅನಿರ್ಧಿಷ್ಟಾವಧಿ ಧರಣಿ ನಡೆಸಲು ಎಲ್ಲಾ ಸಮಾನ ಮನಸ್ಕರು ತೀರ್ಮಾನಿಸಿದ್ದಾರೆ ಎಂದು ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ಕೆ ವಸಂತ ಬಂಗೇರ ಹೇಳಿದ್ದಾರೆ.
ಅವರು ಬೆಳ್ತಂಗಡಿ ಗುರುನಾರಾಯಣ ಸಭಾಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಜಿರೆ ಗ್ರಾಮದ ಗುರಿಪಳ್ಳ ರಸ್ತೆಯ ಹಲಕ್ಕೆ ಎಂಬಲ್ಲಿ ನಿವೇಶನದ ವಿಚಾರವಾಗಿ ದುಷ್ಕರ್ಮಿಗಳ ಗುಂಪು, ಸಾರ್ವಜನಿಕರು ಓಡಾಡುವ ಉಜಿರೆ ಗುರಿಪಳ್ಳ ರಸ್ತೆಯಲ್ಲಿಯೇ ಸಾರ್ವಜನಿಕರ ಎದುರು ಆದಿವಾಸಿ ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿರುವುದು ಖಂಡನೀಯ. ಹಿಂದೂ ಹಿಂದೂ ನಾವೆಲ್ಲ ಒಂದು, ಮಹಿಳೆಯರೆಂದರೆ ಮಾತೆಗೆ ಸಮಾನರು ಎಂದು ಬಾಯಿ ಪಟಾಕಿ ಬಿಡುತ್ತಾ ಮಾತೆಯರ ಹಾಗೂ ಹಿಂದುಗಳ ಮಾನ ಬೀದಿ ಪಾಲು ಮಾಡುವ ಸಂಘ ಪರಿವಾರದ ಮುಖಂಡನ ನೇತೃತ್ವದಲ್ಲಿ ನಡೆದ ಈ ಕೃತ್ಯ ಅತ್ಯಂತ ಹೇಯವಾದದ್ದು. ಪ್ರಕರಣದ ಆರೋಪಿಗಳಲ್ಲಿ ಓರ್ವ ಬಿಜೆಪಿ ಎಸ್.ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಹಾಗೂ ಉಳಿದವರು ಆತನ ತಂಡ. ಆದ್ದರಿಂದ ಇಲ್ಲಿಯ ಶಾಸಕರು ಈ ಆರೋಪಿಗಳನ್ನು ಅಡಗಿಸಿಟ್ಟಿದ್ದಾರೆ. ಇನ್ನೂ ಆರೋಪಿಗಳ ಬಂಧನವಾಗಿಲ್ಲ ಎಂಬುದನ್ನು ಗಮನಿಸಿದರೆ ಮಹಿಳಾ ದೌರ್ಜನ್ಯಕ್ಕೆ ಬಿಜೆಪಿಯದ್ದೇ ಕುಮ್ಮಕ್ಕು ಎಂಬುವುದು ಸಾಬೀತಾಗಿದೆ ಎಂದರು.
ಸರಕಾರಿ ಜಮೀನಿನಲ್ಲಿ ಇರುವ ವಾಸದ ಮನೆಯನ್ನು ತೆಗೆಯಬೇಕು ಎನ್ನಲು ಇವರು ಯಾರು? ಸರಕಾರಿ ಜಮೀನಿನಲ್ಲಿ ಮನೆ ಇರುವುದಕ್ಕೆ 94ಸಿ ಅಡಿ ಹಕ್ಕು ಪತ್ರ ಇದ್ದೂ ಕೂಡ ಮಹಿಳೆಗೆ ರಕ್ಷಣೆ ನೀಡಬೇಕಾದ ಇಲಾಖೆ ಆರೋಪಿಗಳ ಪರ ನಿಂತಿರುವಂತೆ ಅನುಮಾನ ಕಾಡತೊಡಗಿದೆ. ಈ ಉಜಿರೆಯ ಈ ಸಮಾಜ ಘಾತುಕ ಶಕ್ತಿಗಳು ಹಕ್ಕಿನ ಭೂಮಿಯಲ್ಲಿ ಇರಬಾರದೆಂದು ಬಡ ಮಹಿಳೆಯರ ಬಟ್ಟೆ ಬಿಚ್ಚುತ್ತಾರೆ. ಅದೂ ಬಿಜೆಪಿ ಪಕ್ಷದ ಎಸ್.ಟಿ ಮೋರ್ಚಾದ ಜಿಲ್ಲಾಧ್ಯಕ್ಷರ ನಾಯಕತ್ವದಲ್ಲಿ ನಡೆಯುತ್ತದೆ ಎಂದರೆ ಇವರು ತಾಯಂದಿರ ಮೇಲೆ, ಹಿಂದುಗಳ ಮೇಲೆ ಕಾನೂನಿನ ಮೇಲೆ ನಂಬಿಕೆ ಇಲ್ಲದವರೆಂದೇ ಭಾವಿಸಬೇಕಾಗಿದೆ ಎಂದರು.
ಮೇ.9 ರಂದು ನಡೆಯಲಿರುವ ಅನಿರ್ಧಿಷ್ಟಾವಧಿ ಧರಣಿಯಲ್ಲಿ ವಿಧಾನ ಪರಿಷತ್ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಪಕ್ಷದ ವಿವಿಧ ನಾಯಕರುಗಳು , ಕಮ್ಯುನಿಸ್ಟ್ ಪಕ್ಷದವರು, ಉಜಿರೆಯ ಮಹಿಳಾ ಹೋರಾಟ ಸಮಿತಿ, ಜನವಾಧಿ ಮಹಿಳಾ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಭಾಗಿಯಾಗಲಿದ್ದಾರೆ ಎಂದರು.
ಕಮ್ಯುನಿಸ್ಟ್ ಪಕ್ಷದ ನಾಯಕ ಬಿಎಂ ಭಟ್ ಮಾತನಾಡಿ ಬಿಜೆಪಿ ಪಕ್ಷ ಹಿಂದುಗಳ ರಕ್ಷಣೆ ಮಾಡುತ್ತೇವೆಂದು ಹೇಳುತ್ತಾ ಹಿಂದೂ ದಲಿತರು ಮಹಿಳಾ ವಿರೋಧಿ ಚಟುವಟಿಕೆಗಳು ಮಾಡುತ್ತಿದೆ ಎಂದರು.
ಉಜಿರೆ ಸಂತ್ರಸ್ತೆ ಯ ಸಹೋದರಿ ಜ್ಯೋತಿ ಮಾತನಾಡಿ ನಮ್ಮ ಸಮಾಜದ ನಾಯಕರು ನ್ಯಾಯ ಕೊಡುತ್ತೇನೆಂದು ಹೇಳಿ ಈವರೆಗೆ ನಮ್ಮ ಮನೆಗೂ ಬರಲಿಲ್ಲ. ಮಾನಸಿಕವಾಗಿ ನಮ್ಮ ಮನೆಯವರು ಕಷ್ಟದಲ್ಲಿದ್ದಾರೆ ಈ ಘಟನೆಗೆ ಕಾರಣವಾದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿಯೂ ತಾರತಮ್ಯ ಮಾಡುತ್ತಿದ್ದಾರೆ ಶೀಘ್ರವಾಗಿ ಅವರನ್ನು ಬಂಧಿಸಿ ನಮಗೆ ನ್ಯಾಯ ಕೊಡಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಬೆಳ್ತಂಗಡಿ ಗ್ರಾಮೀಣ ಅಧ್ಯಕ್ಷ ರಂಜನ್ ಜಿ ಗೌಡ, ಬ್ಲಾಕ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್ ಕೆ, ಜನವಾದಿ ಮಹಿಳಾ ಸಂಘಟನೆಯ ತಾಲೂಕು ಸಮಿತಿ ಸಂಚಾಲಕಿ ಕಿರಣ್ ಪ್ರಭಾ, ಮಹಿಳಾ ದೌರ್ಜನ್ಯ ವಿರೋಧಿ ಹೋರಾಟ ಸಮಿತಿಯ ಸಂಚಾಲಕಿ ಅನಿತಾ , ನೆಬಿಸಾ ಉಪಸ್ಥಿತರಿದ್ದರು.