Saturday, August 29, 2026
Homeತಾಜಾ ಸುದ್ದಿಶಿಶಿಲದ ದೇವರ ಮೀನುಗಳಿಗೆ ನೀರು ನಾಯಿಗಳ ಕಾಟ: ದೇವಾಲಯದ ಆಡಳಿತ ಮಂಡಳಿಗೆ ಸವಾಲಾದ ಮೀನುಗಳ ರಕ್ಷಣೆ

ಶಿಶಿಲದ ದೇವರ ಮೀನುಗಳಿಗೆ ನೀರು ನಾಯಿಗಳ ಕಾಟ: ದೇವಾಲಯದ ಆಡಳಿತ ಮಂಡಳಿಗೆ ಸವಾಲಾದ ಮೀನುಗಳ ರಕ್ಷಣೆ

- Advertisement -
- Advertisement -

ಮಂಗಳೂರು: ಶಿಶಿಲದ ಪ್ರಖ್ಯಾತ ಶಿಶಿಲೇಶ್ವರ ದೇವಸ್ಥಾನದ ಕಪಿಲಾ ನದಿಯಲ್ಲಿನ ಮೀನುಗಳಿಗೆ ನೀರು ನಾಯಿಗಳ ಕಾಟ ಎದುರಾಗಿದೆ. ಪರಿಣಾಮ ದೇವರ ಮೀನುಗಳ ರಕ್ಷಣೆ ದೇವಾಲಯದ ಆಡಳಿತ ಮಂಡಳಿಗೆ ತಲೆನೋವಾಗಿ ಪರಿಣಮಿಸಿದೆ. ಕಳೆದೆರಡು ವರ್ಷಗಳಿಂದ ಬೆಳ್ತಂಗಡಿ ತಾಲೂಕಿನ ವಿವಿಧೆಡೆಗಳಲ್ಲಿ ನೀರುನಾಯಿಗಳ ಹಾವಳಿ‌ ಆರಂಭವಾಗಿದೆ. ಈ ನೀರುನಾಯಿಗಳಿಗೆ ಮೀನು, ಕಪ್ಪೆ ಮುಂತಾದ ಜಲಚರಗಳೇ ಆಹಾರ. ಈ ನೀರುನಾಯಿಗಳು ನದಿ, ನೀರಿನ ತಾಣ, ಬಂಡೆಗಳ ಪೊಟರೆಗಳಲ್ಲಿ ಹೆಚ್ಚಾಗಿ ಕಾಣ ಸಿಗುತ್ತವೆ.

ಶಿಶಿಲೇಶ್ವರ ದೇವಸ್ಥಾನದ ಕಪಿಲಾ ನದಿಯಲ್ಲಿ ಯಥೇಚ್ಛವಾಗಿ ಬೃಹತ್ ಗಾತ್ರದ ಮೀನುಗಳು ಕಂಡು ಬರುತ್ತವೆ. ಇವುಗಳು ದೇವರ ಮೀನುಗಳೆಂದೇ ಪ್ರಖ್ಯಾತವಾಗಿದೆ. ಆದ್ದರಿಂದ ಇಲ್ಲಿ ಸುಲಭವಾಗಿ ಮೀನುಗಳು ನೀರುನಾಯಿಗಳಿಗೆ ಲಭ್ಯವಾಗುತ್ತಿದ್ದು, ತಮ್ಮ ಹಸಿವು ನೀಗಿಸಲು ದೇವರ ಮೀನುಗಳನ್ನು ತಿನ್ನಲಾರಂಭಿಸಿವೆ. ಶಿಶಿಲದಲ್ಲಿ ಮೀನು ಹಿಡಿಯುವುದು ನಿಷಿದ್ಧ. ಅಲ್ಲದೆ ನೀರುನಾಯಿಗಳು ಅಳಿವಿನಂಚಿನಲ್ಲಿರುವ ಪ್ರಾಣಿಗಳು‌. ಅವುಗಳನ್ನು ಹಿಡಿಯುವಂತೆಯೂ ಇಲ್ಲ. ಬೇರೆಡೆಗೆ ಬಿಡುವಂತೆಯೂ ಇಲ್ಲ. ಆದ್ದರಿಂದ ಅರಣ್ಯ ಇಲಾಖೆಗೂ ಸಹ ದೇವರ ಮೀನಿನ ರಕ್ಷಣೆ ಹಾಗೂ ಇವುಗಳನ್ನು ಭಕ್ಷಣೆ ಮಾಡುವ ನೀರುನಾಯಿಗಳನ್ನು ಉಳಿಸುವ ಅನಿವಾರ್ಯತೆ ಇದೆ.

ದೇವರ ಮೀನುಗಳ ಮೇಲೆ ನೀರುನಾಯಿ ಹಾವಳಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾಮಾಜಿಕ ಕಾರ್ಯಕರ್ತ ಜಯರಾಮ ನೆಲ್ಲಿತ್ತಾಯ, “ಶಿಶಿಲದ ಕಪಿಲಾ ನದಿಯಲ್ಲಿ 26 ವರ್ಷಗಳ ಹಿಂದೆ ದುಷ್ಕರ್ಮಿಗಳು ಕಪಿಲೆಗೆ ವಿಷ ಉಣಿಸಿ ಸಹಸ್ರ ಸಹಸ್ರ ಸಂಖ್ಯೆಯ ದೇವರಮೀನುಗಳ ಸಾವಿಗೆ ಕಾರಣರಾಗಿದ್ದರು. ಅಂದಿನಿಂದ ಮತ್ಸ್ಯ ಹಿತರಕ್ಷಣಾ ವೇದಿಕೆಯು ಮೀನುಗಳ ಸಂರಕ್ಷಣೆಗೆ ಪಣತೊಟ್ಟಿದೆ. ಇದೀಗ ನೀರುನಾಯಿ ಹಾವಳಿ ಎದುರಾಗಿದ್ದು ಏನು ಮಾಡುವುದೆಂದೇ ತೋಚದಾಗಿದೆ. ಅರಣ್ಯ ಇಲಾಖೆ ಅವುಗಳನ್ನು ಹಿಡಿದು ಸ್ಥಳಾಂತರಿಸುವುದೊಂದೇ ಪರಿಹಾರ” ಎನ್ನುವುದು ಅವರ ಅಭಿಪ್ರಾಯವಾಗಿದೆ.

ನೀರುನಾಯಿಗಳ ಆವಾಸಸ್ಥಾನವೇ ನದಿಗಳಲ್ಲಿನ ಪೊಟರೆ/ ಪೊದೆಗಳು. ಅವುಗಳಿಗೆ ಜಲಚರಗಳೇ ಆಹಾರ. ಹಾಗಿರುವಾಗ ಅವುಗಳ ಆಹಾರ ಪದ್ಧತಿಯನ್ನಾಗಲೀ ಆವಾಸ ಸ್ಥಾನವನ್ನಾಗಲೀ ಬದಲಾಯಿಸಲು ಸಾಧ್ಯವಿಲ್ಲ. ಹಾಗೇನಾದರೂ ಮಾಡಿದರೆ ಅವು ಸಾವನ್ನಪ್ಪುವ ಸಾಧ್ಯತೆ ಇದೆ. ದೇವರ ಮೀನುಗಳ ರಕ್ಷಣೆ, ನೀರುನಾಯಿಗಳ ಉಳಿವು ಎರಡೂ ಅನಿವಾರ್ಯವಾಗಿರುವುದರಿಂದ ಯಾವ ಕ್ರಮ ಏನು ಕೈಗೊಳ್ಳಬಹುದೆಂದು ಪರಿಶೀಲಿಸಲಾಗುವುದು” ಎಂದು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂದನ್ ಹೇಳಿದ್ದಾರೆ.

ನದಿಯ ದಡಲ್ಲಿನ ಪೊದೆಗಳಲ್ಲಿ ನೀರು ನಾಯಿ ವಾಸಿಸುವುದರಿಂದ ಅವುಗಳನ್ನು ಸ್ಥಳಾಂತರಿಸುವ ಬದಲಿಗೆ ನದಿ ಸ್ಥಳದಲ್ಲಿನ ಕಸಕಡ್ಡಿ, ಪದೆಗಳನ್ನು ತೆರವು ಮಾಡಬಹುದು. ನೀರು ಹೆಚ್ಚಾದರೆ ಅವು ತಾವಾಗಿಯೇ ಸ್ಥಳಾಂತರಗೊಳ್ಳುತ್ತವೆ. ಉಳಿದಂತೆ ಕ್ಷೇತ್ರದ ಪ್ರಮುಖರ ಬೇಡಿಕೆಯಂತೆ ರಾತ್ರಿ ವೇಳೆ ಕಾವಲು ಕಾಯಲು ನಿರ್ಧರಿಸಲಾಗಿದೆ. ಈ ವೇಳೆ ನೀರು ನಾಯಿ ಕಂಡು ಬಂದರೆ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ ಎಂದು ಮಧುಸೂದನ್ ತಿಳಿಸಿದ್ದಾರೆ.

ಕುದುರೆಮುಖ ಪರ್ವತ ಶ್ರೇಣಿಗಳ ತಪ್ಪಲಿನಲ್ಲಿರುವ ಶಿಶಿಲ ಗ್ರಾಮದ ಶಿಶಿಲೇಶ್ವರ ದೇವಸ್ಥಾನದ ಪ್ರಮುಖ ಆಕರ್ಷಣೆ ದೇವರ ಮೀನುಗಳು. ಕಪಿಲಾ ನದಿ ದಂಡೆಯಲ್ಲಿರುವ ಶಿಶಿಲ ದೇವಸ್ಥಾನದ ಪಕ್ಕದಲ್ಲೇ ಇರುವ ದೇವರ ಮೀನುಗಳು ಅಂತಾ ಪೊರುವಾಲು ಎಂಬು ಜಾತಿಯ ಮೀನುಗಳನ್ನು ಜನ ಆರಾಧಿಸುತ್ತಿದ್ದಾರೆ. ಜನ ಇಂದಿಗೂ ಪ್ರೀತಿಯಿಂದ ಆ ಮೀನುಗಳಿಗೆ ಮಂಡಕ್ಕಿ ಹಾಕಿ ಮಿನುಗಳು ಆಹಾರ ತಿನ್ನುವ ಅಂದ ನೋಡುತ್ತಾರೆ. ಲಕ್ಷಾಂತರ ಮೀನುಗಳು ಒಂದೆಡೆ ಸೇರಿದಾಗ ಉಂಟಾಗುವ ಕಂಪನ ಭಕ್ತರ ಮನಸ್ಸನ್ನು ಮುದಗೊಳಿಸುತ್ತದೆ


- Advertisement -

Latest News

error: Content is protected !!