ಉಡುಪಿ: ಬೀದರ್ ಜಿಲ್ಲೆಯಲ್ಲಿ ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಪ್ರಕರಣದ ಬೆನ್ನಲ್ಲೇ ಉಡುಪಿಯ ಹಿಜಾಬ್ ಹೋರಾಟಗಾರ್ತಿಯಾಗಿದ್ದ ಆಲಿಯಾ ಅಸಾದಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಪ್ರಶ್ನೆ ಮಾಡಿದ್ದಾರೆ.
ಜನಿವಾರ ಬ್ರಾಹ್ಮಣನಿಗೆ ಎಷ್ಟು ಅತ್ಯಗತ್ಯವೋ, ಹಿಜಾಬ್ ಕೂಡಾ ನಮಗೆ ಅಷ್ಟೇ ಅಗತ್ಯ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಆಲಿಯಾ, ಜನಿವಾರದ ಕಾರಣಕ್ಕೆ ಪರೀಕ್ಷೆ ಬಹಿಷ್ಕರಿಸಲ್ಪಟ್ಟ ಬ್ರಾಹ್ಮಣನ ನೋವು ಮತ್ತು ಹಿಜಾಬ್ ಕಾರಣಕ್ಕೆ ಪರೀಕ್ಷೆ ಬಹಿಷ್ಕರಿಸಲ್ಪಟ್ಟ ಮುಸ್ಲಿಂ ಹೆಣ್ಣು ಮಕ್ಕಳ ನೋವು ಒಂದೇ ಅಲ್ಲವೆ ಎಂದು ಪ್ರಶ್ನೆ ಮಾಡಿದ್ದಾರೆ.
ಅಲ್ಲದೇ, ಜನಿವಾರವನ್ನು ತಡೆದ ಅಧಿಕಾರಿಯನ್ನು ಸಸ್ಪೆಂಡ್ ಮಾಡುತ್ತಾರೆ, ಆದರೆ ಹಿಜಾಬ್ ಧರಿಸಿದವರಿಗೆ ಕಾಲೇಜು ಗೇಟ್ ಬಂದ್ ಮಾಡಿದ ಅಧಿಕಾರಿಗೆ ಯಾವ ಶಿಕ್ಷೆಯೂ ಇಲ್ಲ ಎಂದು ಹೇಳಿರುವ ಆಲಿಯಾ ಅಸಾದಿ, ಬ್ರಾಹ್ಮಣ ವಿದ್ಯಾರ್ಥಿಗೆ ಉಚಿತ ಇಂಜಿನಿಯರಿಂಗ್ ಸೀಟು ನೀಡುತ್ತೀರಿ ಆದರೆ ನಮಗೆ ಸೌಜನ್ಯಕ್ಕೂ ಪರೀಕ್ಷೆ ಬರೆದಿದ್ದಿರೋ ಇಲ್ಲವೋ ಎಂದು ಕೇಳಿಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ವಾರ ನಡೆದಿದ್ದ ಸಿಇಟಿ ಪರೀಕ್ಷೆ ವೇಳೆ ಬೀದರ್ ನಲ್ಲಿ ವಿದ್ಯಾರ್ಥಿ ಸುಚೀವೃತ ಕುಲಕರ್ಣಿಗೆ ಜನಿವಾರ ತೆಗೆಯಲು ಒಪ್ಪದ್ದಕ್ಕೆ ಪರೀಕ್ಷೆಗೆ ಅವಕಾಶ ನಿರಾಕರಿಸಿದ್ದ ಪ್ರಕರಣ ಭಾರೀ ವಿವಾದ ಮತ್ತು ಪ್ರತಿಭಟನೆಗೆ ಕಾರಣವಾಗಿತ್ತು.


