ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿನಲ್ಲಿ ರೋಡ್ ಶೋ ಅನ್ನು ಪ್ರಾರಂಭಿಸುವ ಮೊದಲು ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ದೊಡ್ಡ ಗೌರವ ಸಲ್ಲಿಸಿದ್ದಾರೆ. ದೇಶ ವಿದೇಶಗಳ ಜನರು ನಾರಾಯಣ ಗುರುಗಳ ಪ್ರತಿಮೆಯನ್ನು ನೋಡುವಂತೆ ಮಾಡಿದ್ದಾರೆ. ಇದು ತುಂಬಾ ಸಂತಸ ತಂದಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜಕೀಯ ಕಾರಣಕ್ಕಾಗಿ ಮಾಲಾರ್ಪಣೆ ಮಾಡಿದ್ದಾರೆ ಎಂದು ಕಾಂಗ್ರೆಸ್ನವರು ಹೇಳುವುದು ಸರಿಯಲ್ಲ. ಒಂದು ವೇಳೆ ರಾಜಕೀಯ ಕಾರಣವಾಗಿದ್ದರೆ ಮೋದಿಯವರು ಬರುವ ಮೊದಲು ಕಾಂಗ್ರೆಸ್ನವರು ಸಿಎಂ ಸಿದ್ದರಾಮಯ್ಯ ಅವರನ್ನು ಕರೆ ತಂದು ಮಾಲಾರ್ಪಣೆ ಮಾಡಿಸಬಹುದಿತ್ತು. ನಾರಾಯಣ ಗುರುಗಳಿಗೆ ಮಾಲಾರ್ಪಣೆ ಮಾಡಿರುವುದನ್ನು ಪ್ರಶ್ನಿಸಬಾರದು. ನಾರಾಯಣ ಗುರುಗಳು ಜಗತ್ತಿನ ಶ್ರೇಷ್ಠ ಮಾನವತಾವಾದಿ. ಅವರಿಗೆ ಗೌರವ ನೀಡುವುದರಲ್ಲಿ ಯಾರು ಕೂಡ ಮತ್ಸರ ಮಾಡಬಾರದು,’ ಎಂಬುದಾಗಿ ಸತೀಶ್ ಕುಂಪಲ ವಿನಂತಿಸಿದರು.
ವೃತ್ತ ನಿರ್ಮಿಸಿದ್ದು ಬಿಜೆಪಿಯವರು; ಲೇಡಿಹಿಲ್ ನಲ್ಲಿ ನಾರಾಯಣ ಗುರುಗಳ ವೃತ್ತ ನಿರ್ಮಾಣಕ್ಕೆ ಬಿಜೆಪಿ ಹೋರಾಟವನ್ನೇ ಮಾಡಿತ್ತು. ರವಿಶಂಕರ ಮಿಜಾರು ಮುಡಾ ಅಧ್ಯಕ್ಷರಾಗಿದ್ದಾಗ, ಪ್ರೇಮಾನಂದ ಶೆಟ್ಟಿ ಅವರು ಮೇಯರ್ ಆಗಿದ್ದಾಗ ದಿವಾಕರ ಪಾಂಡೇಶ್ವರ ಅವರು ವೃತ್ತ ನಿರ್ಮಾಣ ಯೋಜನೆ ಪ್ರಸ್ತಾವಿಸಿದ್ದರು. ಸಂಸದ ನಳಿನ್ ಕುಮಾರ್, ಶಾಸಕ ವೇದವ್ಯಾಸ ಕಾಮತ್ ಅವರು ಮುತುವರ್ಜಿ ವಹಿಸಿ ಕೆಲಸ ಮಾಡಿಸಿದ್ದರು. ಈಗ ಪ್ರಧಾನಿಯವರು ವೃತ್ತದಲ್ಲಿರುವ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ. ಹಾಗಾಗಿ ವೃತ್ತ ನಿರ್ಮಾಣದ ಶ್ರಮ ಕೂಡ ಸಾರ್ಥಕವಾಗಿದೆ ಎಂದು ಸತೀಶ್ ಕುಂಪಲ ಹೇಳಿದರು.