Saturday, April 20, 2024
Homeಕರಾವಳಿಸ್ವಾತಂತ್ರ್ಯ ಅಮೃತ ಮಹೋತ್ಸವದ ಹೆಸರಿನಲ್ಲಿ ಶಾಸಕ ಹರೀಶ್‌ ಪೂಂಜರಿಂದ ಹಫ್ತಾ ವಸೂಲಿ: ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕ...

ಸ್ವಾತಂತ್ರ್ಯ ಅಮೃತ ಮಹೋತ್ಸವದ ಹೆಸರಿನಲ್ಲಿ ಶಾಸಕ ಹರೀಶ್‌ ಪೂಂಜರಿಂದ ಹಫ್ತಾ ವಸೂಲಿ: ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ಆರೋಪ

spot_img
- Advertisement -
- Advertisement -

ಬೆಳ್ತಂಗಡಿ: ಆಗಸ್ಟ್ 15 ರಂದು ಜರಗುವ ಸ್ವಾತಂತ್ರ್ಯ ಅಮೃತ ಮಹೋತ್ಸವದ ಖರ್ಚಿಗಾಗಿ ಮತ್ತು ಸರಕಾರದ ಯಾವುದೇ ಅನುದಾನ ಇಲ್ಲದೆ ತಾನು ಘೋಷಿಸಿದ ವಿವಿಧ ಸವಲತ್ತುಗಳ ವಿತರಣೆಗಾಗಿ ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜರವರು, ಮದ್ಯ ವ್ಯಾಪಾರಿಗಳು, ಸರಕಾರಿ ಅಧಿಕಾರಿಗಳು, ವಿವಿಧ ಗುತ್ತಿಗೆದಾರರು ಇಂತಿಷ್ಟು ಹಣ ನೀಡಬೇಕೆಂಬ ಫರ್ಮಾನು ಹೊರಡಿಸುವ ಮೂಲಕ ಹಫ್ತಾ ವಸೂಲಿಗೆ ಮುಂದಾಗಿರುವ ಬಗ್ಗೆ ನನಗೆ ಸಾಕಷ್ಟು ದೂರುಗಳು ಬಂದಿದೆ ಎಂದು ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ಅವರು ಆರೋಪಿಸಿದ್ದಾರೆ.

ಇಂದು ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಶಾಸಕರು ಸ್ವಾತಂತ್ರ್ಯ ಅಮೃತ ಮಹೋತ್ಸವದ ಹೆಸರಿನಲ್ಲಿ ಈ ರೀತಿಯ ದಂಧೆಗೆ ಇಳಿಯುವ ಮೂಲಕ ಅವರು ತಾನೊಬ್ಬ ಕಡು ಭ್ರಷ್ಟ ಶಾಸಕ ಎಂಬುದನ್ನು ತೋರಿಸಿ ತಾಲೂಕಿನ ಜನತೆಯ ಮುಂದೆ ಬೆತ್ತಲಾಗಿದ್ದಾರೆ. ಈಗಾಗಲೇ ಕಾಮಗಾರಿಗಳಲ್ಲಿ 40% ಕಮಿಷನ್ ತಿಂದು ತೇಗುತ್ತಿರುವ ಶಾಸಕರ ಈ ಹಫ್ತಾ ವಸೂಲಿಗೆ ಯಾರೂ ಹೆದರಬಾರದೆಂದು ನಾನು ಈ ಮೂಲಕ ವಿನಂತಿಸುತ್ತೇನೆ. ಈ ಬಗ್ಗೆ ಒತ್ತಡ ತಂದಲ್ಲಿ ನನ್ನ ಗಮನಕ್ಕೆ ತರುವಂತೆ ಈ ಮೂಲಕ ಆಗ್ರಹಿಸುತ್ತಿದ್ದೇನೆ ಎಂದಿದ್ದಾರೆ.

ಇತ್ತೀಚೆಗೆ ಗುರುವಾಯನಕೆರೆಯ ಖಾಸಗಿ ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸುವ ಮೂಲಕ ತನ್ನ ಬಾರ್ ಎಂಡ್ ರೆಸ್ಟೋರೆಂಟ್ ನ್ನು ಅಧಿಕಾರಿಗಳಿಗೆ ಪರಿಚಯಿಸುವ ಕೆಲಸವನ್ನು ಶಾಸಕರಾದ ಹರೀಶ್ ಪೂಂಜರವರು ನಡೆಸಿದ್ದು ನಾಚಿಕೆಗೇಡು. ತಾಲೂಕಿನ ಮುಕುಟದಂತಿರುವ ತಾಲೂಕು ಆಡಳಿತ ಸೌಧದಲ್ಲಿ ಸಭೆ ನಡೆಸದೆ ಪಟ್ಟಣದ ಹೊರಭಾಗದಲ್ಲಿರುವ ಒಂದು ಬಾರ್ ಎಂಡ್ ರೆಸ್ಟೋರೆಂಟ್ ನಲ್ಲಿ ಈ ಸಭೆ ನಡೆಸಿದುದರ ಔಚಿತ್ಯವೇನು ಎಂಬುದನ್ನು ಶಾಸಕರು ಜನತೆಯ ಮುಂದಿಡಬೇಕೆಂದು ನಾನು ಆಗ್ರಹಿಸುತ್ತಿದ್ದೇನೆ ಎಂದು ಹೇಳಿದರು.

ಇನ್ನು ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಧರ್ಭದಲ್ಲಿ ಬೆಳ್ತಂಗಡಿಯಲ್ಲಿ ನಡೆಯುವ ಸಮಾರಂಭದಲ್ಲಿ ಮಾಜಿ ಸಚಿವರಾದ ಗಂಗಾಧರ ಗೌಡ, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ಮತ್ತು ನನಗೆ ಸನ್ಮಾನ ಕಾರ್ಯಕ್ರಮ ಇದೆ ಎನ್ನುವ ವಿಚಾರ ಪತ್ರಿಕೆಗಳ ಮೂಲಕ ತಿಳಿಯಿತು. ಆದರೆ ಈ ಬಗ್ಗೆ ನನಗೆ ಯಾವುದೇ ಆಹ್ವಾನ ಇದುವರೆಗೆ ಬಂದಿಲ್ಲ. ನಾನು ಆ ಸನ್ಮಾನ ಸ್ವೀಕರಿಸಲು ಹೋಗೋದು ಕೂಡ ಇಲ್ಲ. ಶಾಸಕರು ಹಫ್ತಾ ವಸೂಲಿ ಮಾಡಿ ನೀಡುವ ಯಾವುದೇ ಸನ್ಮಾನವನ್ನು ನಾನು ಸ್ವೀಕರಿಸುವುದಿಲ್ಲ’ ಎಂದು ಮೂಲಕ ಅವರಿಗೆ ತಿಳಿಸಲು ಬಯಸುತ್ತೇನೆ.

ಜಿಲ್ಲೆಯ ಎಲ್ಲಾ ಕಡೆ ಆಕ್ರಮ ಸಕ್ರಮ ಬೈಠಕ್ ನಡೆಸಿ ಬಡ ರೈತರಿಗೆ ನ್ಯಾಯ ಒದಗಿಸುವ ಕೆಲಸಗಳಾಗುತ್ತಿದ್ದರೂ ಬೆಳ್ತಂಗಡಿಯಲ್ಲಿ ಕೇವಲ ಒಂದು ಸಿಟ್ಟಿಂಗ್ ನಡೆಸಿ ನಂತರ ಬೈಠಕ್ ಮೊಟಕುಗೊಳಿಸಿರುವುದು ಯಾಕೆ? ಕಳೆದ ಗ್ರಾಮ ಪಂಚಾಯತ್ ಚುನಾವಣೆಯ ಸಂಧರ್ಭದಲ್ಲಿ ಗ್ರಾಮ ಗ್ರಾಮಗಳಿಗೆ ತೆರಳಿ ಮಾನ್ಯ ಶಾಸಕರಾದ ಹರೀಶ್ ಪೂಂಜಾರವರು ನೀವೆಲ್ಲ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿ. ಜೆ. ಪಿ ಪಕ್ಷದ ಪ್ರತಿನಿಧಿಗಳನ್ನು ಗೆಲ್ಲಿಸಿದರೆ ತಕ್ಷಣ ನಿಮ್ಮೆಲ್ಲರ ಕುಮ್ಮಿ ಭೂಮಿ ಸೇರಿದಂತೆ ಅಕ್ರಮ ಸಾಗುವಳಿಯನ್ನು ಸಕ್ರಮೀಕರಣ ಮಾಡಿಸಿಕೊಡುತ್ತೇನೆ’ ಎಂದು ಭರವಸೆ ನೀಡಿದ ಶಾಸಕರು ಈಗ ಅಕ್ರಮ ಸಕ್ರಮ ಧೈಠಕ್ ನಡೆಸದೆ ರೈತರಿಗೆ ಮೋಸ ಮಾಡುತ್ತಿದ್ದಾರೆ. ಈಗಾಗಲೇ ಗ್ರಾಮ ಗ್ರಾಮದಲ್ಲಿ ಬಿ.ಜೆ.ಪಿ ಪಕ್ಷದ ಕೆಲ ಮಧ್ಯವರ್ತಿಗಳು ಹಕ್ಕುಪತ್ರ ಮಾಡಿಸಿಕೊಡುವುದಾಗಿ ಜನರಿಂದ ಲಕ್ಷಗಟ್ಟಲೆ ಹಣ ಸಂಗ್ರಹಿಸಿದ್ದು ಇದರಲ್ಲಿ ಶಾಸಕರಿಗೂ ಕಮಿಷನ್ ಇರುವುದಾಗಿ ನನಗೆ ತಿಳಿದು ಬಂದಿರುತ್ತದೆ. ಶಾಸಕರು ಈ ವಿಚಾರಕ್ಕಾಗಿಯೇ ತಾಲೂಕು ಕಚೇರಿಯಲ್ಲಿ ತನ್ನದೇ ಆದ ಓರ್ವ ಖಾಸಾಗಿ ಸಿಬ್ಬಂದಿಯನ್ನು ನೇಮಿಸಿದ್ದು, ಆತ ತನ್ನ ಕೊರಳಿಗೆ ಒಂದು ಐ ಡಿ ಕಾರ್ಡ್ ಹಾಕಿಕೊಂಡು ತಾಲೂಕು ಕಚೇರಿಯಲ್ಲಿ ಅತ್ತಿಂದಿತ್ತ ತಿರುಗುತ್ತಿದ್ದಾನೆ. ಆತನನ್ನು ತಕ್ಷಣ. ಬೆಳ್ತಂಗಡಿ ತಹಶೀಲ್ದಾರರು, ಕಚೇರಿಯಿಂದ ಹೊರದಬ್ಬುವಂತೆ ಈ ಮೂಲಕ ತಹಶೀಲ್ದಾರರನ್ನು ನಾನು ಆಗ್ರಹಿಸುತ್ತಿದ್ದೇನೆ. ಮುಂದಿನ ಹದನೈದು ದಿನಗಳಲ್ಲಿ ಅಕ್ರಮ ಸಕ್ರಮ ಬೈಠಕ್, ನಡೆಸದಿದ್ದಲ್ಲಿ ಸಾರ್ವಜನಿಕರೊಂದಿಗೆ ಬೆಳ್ತಂಗಡಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ತಾಲೂಕಿನ ಬಹುತೇಕ ರಸ್ತೆಗಳ ಕಾಮಗಾರಿಗಳಲ್ಲಿ ಶಾಸಕ ಹರೀಶ್ ಪೂಂಜಾರವರು ವ್ಯಾಪಕ ಭ್ರಷ್ಟಾಚಾರ ನಡೆಸಿ 40% ಕಮಿಷನ್‌ ಪಡೆದಿದ್ದು ಅದರ ಪರಿಣಾಮ ಈ ವರ್ಷ ಬಿದ್ದ ಮಳೆಗೆ ರಸ್ತೆಗಳೆಲ್ಲ ಮಾಯವಾಗಿರುತ್ತದೆ. ಈ ರಸ್ತೆಗಳನ್ನು ತಕ್ಷಣ ಸರಿಪಡಿಸಬೇಕೆಂದು ನಾನು ಈ ಮೂಲಕ ಆಗ್ರಹಿಸುತ್ತಿದ್ದೇನೆ ಎಂದರು.

ತಾಲೂಕಿನಾದ್ಯಂತ ಶಾಸಕ ಹರೀಶ್‌ ಪೂಂಜಾರವರ ನೇತೃತ್ವದಲ್ಲಿ ವ್ಯಾಪಕ ಮರಳು ದಂಧೆ ಮತ್ತು ಮರಗಳ್ಳತನ ನಡೆಯುತ್ತಿದ್ದು, ಇದಕ್ಕೆ ಕೆಲ ಕಂದಾಯ, ಅರಣ್ಯ ಮತ್ತು ಪೋಲೀಸ್ ಇಲಾಖೆಯ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ. ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಇದೇ ರೀತಿಯ ದಂಧೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ರು.

ಇನ್ನು ತಾಲೂಕಿನ ಹೆಚ್ಚಿನ ಪೋಲೀಸ್ ಠಾಣೆಗಳಲ್ಲಿ ಎಸ್‌.ಐ ಮತ್ತು ಇತರೆ ಪೋಲೀಸ್ ಅಧಿಕಾರಿಗಳು ಕಾನೂನು ಪ್ರಕಾರ ನ್ಯಾಯ ಕೊಡದೆ ಶಾಸಕ ಹರೀಶ್‌ ಪೂಂಜಾ ಹೇಳಿದಂತೆ ರಾಜಕೀಯ ಮಾಡಿ ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಹೆಚ್ಚಿನ ಭ್ರಷ್ಟಾಚಾರಕ್ಕೆ ಒತ್ತು ಕೊಟ್ಟು ಬಡವರು ಪೊಲೀಸ್ ಠಾಣೆ ಒಳಗೆ ಬಾರದಂತೆ ಅನ್ಯಾಯ ಮಾಡುತ್ತಿದ್ದಾರೆ. ಇದನ್ನು ನಾನು ಈ ಮೂಲಕ ಖಂಡಿಸುತ್ತಿದ್ದೇನೆ ಎಂದು ಹೇಳಿದರು.

- Advertisement -
spot_img

Latest News

error: Content is protected !!