ಮಂಗಳೂರು : ಉಳ್ಳಾಲದ ಕುಂಪಲ ಆಶ್ರಯ ಕಾಲೊನಿ ನಿವಾಸಿ ಹಾಗೂ ಹವ್ಯಾಸಿ ಮಾಡೆಲ್ ಪ್ರೇಕ್ಷಾ ನಿಗೂಢ ಸಾವಿನ ಪ್ರಕರಣ ಬೇರೆ ಬೇರೆ ತಿರುವು ಪಡೆದುಕೊಳ್ಳುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಂಜಾ ವ್ಯಸನಿಗಳ ಮೇಲೆ ದೂರಿರುವ ಮೋಹನ್ ಶೆಟ್ಟಿ ಅವರ ಮನೆಗೆ ಗುರುವಾರ ತಡರಾತ್ರಿ ದುಷ್ಕರ್ಮಿಗಳು ಕಲ್ಲೆಸೆದು ಹಾನಿ ಮಾಡಿದ್ದಾರೆ.
ಪ್ರಕರಣ ಸಂಬಂಧ ಉಳ್ಳಾಲ ಪೊಲೀಸರು 13 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇವರಲ್ಲಿ 11 ಮಂದಿ ಗಾಂಜಾ ಸೇವಿರೋದು ವರದಿಯಿಂದ ಸಾಬೀತಾಗಿದೆ.
ಮನೆಯಲ್ಲಿ ಮೋಹನ್ ಮತ್ತು ಪತ್ನಿ ಇಬ್ಬರೇ ಇದ್ದ ಸಂದರ್ಭದಲ್ಲಿ ಗುರುವಾರ ತಡರಾತ್ರಿ 12 ಗಂಟೆಯ ವೇಳೆಗೆ ಮನೆಯ ಕಿಟಕಿ ಗಾಜಿಗೆ ಕಲ್ಲೆಸೆಯಲಾಗಿದೆ. ಗಾಜು ಒಡೆದು ಕಲ್ಲು ಮನೆಯೊಳಕ್ಕೆ ಬಿದ್ದಿದೆ. ಪ್ರೇಕ್ಷಾ ಸಾವು ಸಂಭವಿಸಿದ ಸಂದರ್ಭ ಮೋಹನ್ ಶೆಟ್ಟಿ, ಗಾಂಜಾ ವ್ಯಸನಿಗಳ ಕೃತ್ಯ ಎಂದು ಆರೋಪಿಸಿದ್ದರು. ಅಲ್ಲದೇ ಪ್ರೇಕ್ಷಾ ಮನೆಗೆ ಬಂದಿದ್ದ ಮೂವರು ಯುವಕರ ಕುರಿತು ಹೇಳಿರುವ ಸ್ಥಳೀಯ ಅಂಗಡಿ ಮಾಲೀಕರಿಗೂ ಗಾಂಜಾ ಗ್ಯಾಂಗ್ ಜೀವ ಬೆದರಿಕೆಯೊಡ್ಡಿದೆ.
ಇನ್ನು ‘ವಿದ್ಯಾರ್ಥಿನಿ ಪ್ರೇಕ್ಷಾ ಮನೆಗೆ ಶುಕ್ರವಾರ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಭೇಟಿ ನೀಡಿದರು. ಪ್ರೇಕ್ಷಾಳ ಪಾಲಕರಿಗೆ ಸಾಂತ್ವನ ಹೇಳಿದ ಸಚಿವರು, ಪ್ರಕರಣದ ಹಿಂದೆ ಇರುವವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸ್ ಕಮೀಷನರ್ ಅವರಿಗೆ ಸೂಚಿಸುತ್ತೇನೆ. ಯಾವ ಗಾಂಜಾದವರಿಗೂ ಹೆದರಬೇಕಾದ ಅವಶ್ಯಕತೆಯಿಲ್ಲ. ಪ್ರಸ್ತುತ ಕಾನೂನು ಕಠಿಣವಾಗಿದ್ದು, ಚಿಂತಿಸದಿರಿ’ ಎಂದಿದ್ದಾರೆ..
‘ಮಗಳ ಅಂತಿಮ ಸಂಸ್ಕಾರದ ಸಂದರ್ಭದಲ್ಲೂ ಗಾಂಜಾ ಗ್ಯಾಂಗ್ ಬೆದರಿಕೆ ಒಡ್ಡಿತ್ತು. ಗಾಂಜಾ ವ್ಯಸನಿಗಳ ಕುರಿತು ಮಾತನಾಡದಂತೆ ಎಚ್ಚರಿಕೆಯನ್ನು ನೀಡಿದೆ. ಬಳಿಕ ಅಂಗಡಿಯವರಿಗೆ, ಸ್ಥಳೀಯರಿಗೆ ಜೀವ ಬೆದರಿಕೆಯನ್ನು ಒಡ್ಡಿದೆ. ಅವರಿಗೆ ಇಷ್ಟು ಕಿರುಕುಳ ನೀಡಿದವರು ಮಗಳಿಗೆ ಎಷ್ಟು ಕಿರುಕುಳ ನೀಡಿರಬಹುದು? ಅವರ ಮಾನಸಿಕ ಕಿರುಕುಳದಿಂದಲೇ ಬೇಸತ್ತು ಪ್ರೇಕ್ಷಾ ಸಾವನ್ನಪ್ಪಿದ್ದಾಳೆ’ ಎಂದು ಪ್ರೇಕ್ಷಾ ತಂದೆ ಚಿತ್ತಪ್ರಸಾದ್, ಸಚಿವ ಅಂಗಾರರಿಗೆ ತಿಳಿಸಿದ್ದಾರೆ.
ಪ್ರೇಕ್ಷಾ ಬೆಂಗಳೂರಿನಲ್ಲಿ ನಡೆಯುವ ಫೋಟೋ ಶೂಟ್ನಿಂದ ಭವಿಷ್ಯವಿದೆ. ಪರಿಚಿತ ಯುವಕನೇ ಕರೆದುಕೊಂಡು ಹೋಗುವ ಭರವಸೆ ನೀಡಿದ ಕಾರಣಕ್ಕೆ ಬೆಂಗಳೂರಿಗೆ ತೆರಳಲು ಹೇಳಿದ್ದೆವು. ಅದಕ್ಕಾಗಿ ಸಾವನ್ನಪ್ಪುವ ಹಿಂದಿನ ದಿನ ಬ್ಯೂಟಿಪಾರ್ಲರ್ ಹೋಗಿ ಫೇಷಿಯಲ್ ಕೂಡಾ ಮಾಡಿಸಿದ್ದಳು ಎಂದು ಚಿತ್ತಪ್ರಸಾದ್ ತಿಳಿಸಿದ್ದಾರೆ.
‘ಈ ನಡುವೆ ಗಾಂಜಾ ವ್ಯಸನಿ ಗೆಳೆಯ ಯತೀನ್ರಾಜ್ ಬೆಂಗಳೂರಿಗೆ ತೆರಳದಂತೆ ಬೆದರಿಕೆ ಒಡ್ಡಿರುವ ಕುರಿತು ಪ್ರೇಕ್ಷಾ ಸಹೋದರಿಯಲ್ಲಿ ತಿಳಿಸಿದ್ದಳು. ವಿಚಾರ ಬೇರೆ ಯಾರಿಗೂ ಗೊತ್ತಿರಲಿಲ್ಲ. ಆತ್ಮಹತ್ಯೆ ಮಾಡಿಕೊಂಡ ದಿನ ಬೆಳಿಗ್ಗೆ 10.30ಕ್ಕೆ ನನಗೆ ಕರೆ ಮಾಡಿರುವ ಪ್ರೇಕ್ಷಾ ಮಧ್ಯಾಹ್ನ ಹೊರಡುವುದಾಗಿಯೂ ತಿಳಿಸಿದ್ದಳು. ಆ ಬಳಿಕ ನಡೆದ ಘಟನೆಯೇ ಬೇರೆಯಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.