ಕೊಪ್ಪಳ :ಯಡಿಯೂರಪ್ಪರವರನ್ನು ಬದಲಾವಣೆ ಮಾಡಿದ್ರೆ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಮುಂದಿನ ಸಿಎಂ ಮಾಡಬೇಕು ಎಂದು ಹೇಳುವ ಮೂಲಕ ಪ್ರಣವಾನಂದ ಸ್ವಾಮೀಜಿ ಅವರು ಕೋಟಾ ಶ್ರೀನಿವಾಸ ಪೂಜಾರಿ ಪರ ಬ್ಯಾಟ್ ಬೀಸಿದ್ದಾರೆ.
ಆರ್ಯ ಈಡಿಗ ಸಮಾಜಕ್ಕೆ ಸಾಕಷ್ಟು ಅನ್ಯಾಯವಾಗಿದೆ. ಸರ್ಕಾರ ಇದುವರೆಗೂ ನಮ್ಮ ಸಮಾಜಕ್ಕೆ ನಿಗಮ ಮಂಡಳಿ ಘೋಷಣೆ ಮಾಡಿಲ್ಲ. ಸಣ್ಣ ಸಣ್ಣ ಸಮಾಜಕ್ಕೆ ನಿಗಮ ಮಂಡಳಿ ಘೋಷಣೆ ಮಾಡಿದ್ದಾರೆ.
ಕೂಡಲೇ ಸರ್ಕಾರ ಬ್ರಹ್ಮಶ್ರೀ ನಾರಾಯಣಸ್ವಾಮಿ ನಿಗಮ ಮಂಡಳಿ ಸ್ಥಾಪನೆ ಮಾಡಬೇಕು. ನಮ್ಮ ಸಮಾಜವನ್ನ ಚುನಾವಣೆಯಲ್ಲಿ ಮಾತ್ರ ಉಪಯೋಗಿಸಿಕೊಳುತ್ತಾರೆ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆಯಾದರೆ ಮುಖ್ಯಮಂತ್ರಿ ಸ್ಥಾನವನ್ನು ಕೋಟ ಶ್ರೀನಿವಾಸ ಪೂಜಾರಿಗೆ ಕೊಡಬೇಕು ಎಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಪ್ರಣವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ನಮ್ಮ ಸಮಾಜಕ್ಕೆ ಸರಿಯಾಗಿ ಸರ್ಕಾರಗಳು ಸ್ಪಂದನೆ ಮಾಡದೆ ಹೋದರೆ ಭವಿಷ್ಯದಲ್ಲಿ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದು, ನಮ್ಮ ಸಮಾಜದ ಹುಲಿಗಳಾದ ಮಾಲೀಕಯ್ಯ ಗುತ್ತೆದಾರ, ಎಚ್.ಆರ್.ಶ್ರೀನಾಥ್ ನೇತೃತ್ವದಲ್ಲಿ ಹೋರಾಟ ನಡೆಸುತ್ತೇವೆ ಎಂದಿದ್ದಾರೆ.