ಬೆಳಗಾವಿ: ಹಿಜಾಬ್ ಕೇಸರಿ ಶಾಲು ವಿವಾದ, ಹಲಾಲ್ ಕಟ್ ವರ್ಸಸ್ ಜಟ್ಕಾ ಕಟ್, ದೇವಸ್ಥಾನಗಳಲ್ಲಿ ಮುಸ್ಲಿಂ ವರ್ತಕರಿಗೆ ಆರ್ಥಿಕ ನಿರ್ಬಂಧ, ದೇವಸ್ಥಾನಕ್ಕೆ ತೆರಳುವ ವೇಳೆ ಭಕ್ತರು ಮುಸ್ಲಿಂ ವ್ಯಕ್ತಿಗೆ ಸೇರಿದ ವಾಹನದಲ್ಲಿ ಪ್ರಯಾಣಿಸಬಾರದು ಅಭಿಯಾನದ ಬಳಿಕ ಮತ್ತೊಂದು ಮೆಗಾ ಅಭಿಯಾನಕ್ಕೆ ಹಿಂದೂಪರ ಸಂಘಟನೆಗಳು ಸಿದ್ಧತೆ ನಡೆಸಿವೆ. ರಾಜ್ಯದಲ್ಲಿ ವಕ್ಫ್ ಬೋರ್ಡ್ ಬ್ಯಾನ್, ಮತ್ತು ವಕ್ಫ್ ಬೋರ್ಡ್ ಕಾನೂನು ರದ್ದು ಮಾಡುವಂತೆ ಹೋರಾಟ ಮಾಡುವುದಾಗಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಘೋಷಣೆ ಮಾಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ವಕ್ಫ್ ಬೋರ್ಡ್ ಬಗ್ಗೆ ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿ ದೊಡ್ಡಮಟ್ಟದಲ್ಲಿ ದಾಖಲೆ ಸಂಗ್ರಹಿಸಿ ಬಿಡುಗಡೆ ಮಾಡ್ತೀನಿ. ಯಾವ ಜಿಲ್ಲೆಯಲ್ಲಿ ಯಾವ್ಯಾವ್ದು ವಕ್ಫ್ ಬೋರ್ಡ್ಗೆ ಸೇರಿಕೊಂಡಿದೆ ಎಂದು ಆರ್ಟಿಐ ನಲ್ಲಿ ದಾಖಲೆ ತೆಗೆದುಕೊಂಡಿದ್ದು ಇದರ ಬಗ್ಗೆ ದೊಡ್ಡ ಅಭಿಯಾನ ಮಾಡ್ತೀವಿ ಎಂದಿದ್ದಾರೆ.
ವಕ್ಫ್ ಬೋರ್ಡ್ ಕಾನೂನು ಹಿಂಪಡೆಯುವಂತೆ ಒತ್ತಾಯ ಮಾಡುತ್ತೇವೆ. ವಕ್ಫ್ ಬೋರ್ಡ್ ಕಾನೂನು ಭಯಾನಕ ಇದೆ. ವಕ್ಫ್ ಬೋರ್ಡ್ ಗೆ ಯಾರೆಲ್ಲಾ ಲಿಂಕ್ ಇದ್ದಾರೆ ಅಧಿಕೃತವಾಗಿ ಮಾಹಿತಿ ತೆಗೆಯುತ್ತಿದ್ದೇವೆ. ಹಿಂದಿನ ಬಿಜೆಪಿ ಸರ್ಕಾರ ಇದ್ದ ಸಮಯದಲ್ಲಿ ವಕ್ಫ್ ಬೋರ್ಡ್ ಅಧ್ಯಕ್ಷರಿದ್ದ ಸಮಯದಲ್ಲಿ ಎರಡು ಲಕ್ಷ ಕೋಟಿಯಷ್ಟು ಹಗರಣವನ್ನು ಹೊರತಗೆದಿದ್ರು. ಅದು ಇನ್ನೂ ಕೋರ್ಟ್ನಲ್ಲಿ ನಡೆಯುತ್ತಿದೆ. ವಕ್ಫ್ ಬೋರ್ಡ್ ನಲ್ಲಿ ಬಹಳ ದೊಡ್ಡ ಹಗರಣವಾಗಿದೆ. ಬಿಜೆಪಿಯವರು ಸಹ ಆ ಇಶ್ಯೂ ಹಾಗೇ ಇಟ್ಟಿದ್ದಾರೆ. ಅದಕ್ಕೆ ಬಿಜೆಪಿಯವರು ಸಹ ಪೂರ್ಣ ಬೆಂಬಲ ಕೊಡಲಿಲ್ಲ ಅಂದ್ರು. ಹಾಗೆಯೇ ವಕ್ಫ್ ಬೋರ್ಡ್ ಮಾಹಿತಿ ಅರ್ಧ ಸಿಕ್ಕಿದೆ ಇನ್ನೂ ಅರ್ಧ ತೆಗೆಯುತ್ತಿದ್ದೇವೆ. ವಕ್ಫ್ ಬೋರ್ಡ್ನ ಸರ್ಕಾರ ಕೈಬಿಡಬೇಕು ಅಂತ ಆಗ್ರಹಿಸಿದ್ರು.