ಉಡುಪಿ: ವಿದ್ಯುತ್ ಅನಾಹುತಕ್ಕೆ ಯುವಕನೊಬ್ಬ ಬಲಿಯಾದ ಘಟನೆ ಉಡುಪಿ ಜಿಲ್ಲೆಯ ಉದ್ಯಾವರ ಕನಕೋಡದಲ್ಲಿ ನಿನ್ನೆ ಸಂಜೆ ನಡೆದಿದೆ.
ಮಲ್ಪೆ ಕೊಡವೂರು ನಿವಾಸಿ ಮನೋಜ್ ಕರ್ಕೇರ ಮತ್ತು ಶಶಿಕಲಾ ದಂಪತಿಯ ಪುತ್ರ ಮೋಕ್ಷಿತ್ ಕರ್ಕೇರ (25 ವ) ಮೃತ ದುರ್ದೈವಿ. ನಿನ್ನೆ ಸಂಜೆ ಉದ್ಯಾವರ ಕನಕೋಡದಲ್ಲಿ ಆತನ ಚಿಕಪ್ಪ ಶಂಕರ ಎಂಬವರ ಮನೆಯಲ್ಲಿದ್ದಾಗ ಜೋರಾಗಿ ಬೀಸಿದ ಗಾಳಿ ಮಳೆಗೆ ವಿದ್ಯುತ್ ಕೈ ಕೊಟ್ಟಿತ್ತು. ಹೀಗಾಗಿ ಮೈನ್ ಸ್ವಿಚ್ ಬೋರ್ಡ್ ಪರಿಶೀಲನೆ ನಡೆಸುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.
ವಿದ್ಯುತ್ ಶಾಕ್ ನಿಂದ ಗಂಭೀರ ಗಾಯಗೊಂಡ ಆತನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.ಇಲೆಕ್ಟ್ರೀಷಿಯನ್ ವೃತ್ತಿ ನಡೆಸುತ್ತಿದ್ದ ಮೋಕ್ಷಿತ್ ಕರ್ಕೇರ ಮೆಕ್ಯಾನಿಕ್ ಆಗಿ, ಡೆಕೋರೆಟ್ ಮೊದಲಾದ ಕೆಲಸಗಳನ್ನು ನಡೆಸುತ್ತಿದ್ದನು. ಬಿಡುವಿನ ವೇಳೆಯಲ್ಲಿ ತಾಯಿಯೊಂದಿಗೆ ಮಲ್ಪೆಯಲ್ಲಿ ಮೀನು ಮಾರಾಟದ ವ್ಯವಹಾರದಲ್ಲೂ ಕೈ ಜೋಡಿಸುತ್ತಿದ್ದನು.
ಮನೋಜ್ ಕರ್ಕೇರ ಮತ್ತು ಶಶಿಕಲಾ ದಂಪತಿಯ ಇಬ್ಬರು ಪುತ್ರರಲ್ಲಿ ಮೋಕ್ಷಿತ್ ಹಿರಿಯವನಾಗಿದ್ದು, ಮನೆಗೆ ಆಧಾರವಾಗಿ ಬೆಳೆಯುತ್ತಿದ್ದನು. ಮಗನ ಅಗಲುವಿಕೆಯಿಂದ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿ ಕೊಂಡು ತನಿಖೆ ಮುಂದುವರಿಸಿದ್ದಾರೆ.