ಬಂಟ್ವಾಳ; ಪಾಣೆಮಂಗಳೂರು ಅಕ್ಕರಂಗಡಿ ನಿವಾಸಿ ಹಮೀದ್ ಎಂಬುವರಿಗೆ ಚಾಕುವಿನಿಂದ ಇರಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಟ್ವಾಳ ನಗರ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಎಸ್.ಪಿ.ಯತೀಶ್ ಎನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪ್ರಕರಣ ಸಂಪೂರ್ಣ ಮಾಹಿತಿ ಪಡೆದುಕೊಂಡು ಆರೋಪಿಗಳ ಶೀಘ್ರ ಬಂಧನಕ್ಕೆ ಸೂಚನೆ ನೀಡಿದ್ದಾರೆ.
ಪ್ರಕರಣದ ವಿವರ: ದಿನಾಂಕ: 16.05.2025 ರಂದು ರಾತ್ರಿ ಸಮಯ ಸುಮಾರು 7.45 ಗಂಟೆಗೆ ಯಾಸೀರ್ ಅರಾಫತ್ ಅವರು ಕೆಲಸ ಮಾಡುತ್ತಿದ್ದ ಕ್ಯಾಂಟೀನಿಗೆ ಅವರ ದೂರದ ಸಂಬಂಧಿಯಾದ ಅಬ್ದುಲ್ ಹಮೀದ್ ಎಂಬವರು ಬಂದು ತಂಪು ಪಾನೀಯವನ್ನು ಕುಡಿದು ಪೋನಿನಲ್ಲಿ ಮಾತನಾಡಿಕೊಂಡಿದ್ದಾಗ, ಅಲ್ಲಿಗೆ ಇಬ್ಬರು ಅಪರಿಚಿತರು ಬೈಕಿನಲ್ಲಿ ಬಂದಿದ್ದು, ಅವರುಗಳ ಪೈಕಿ ಓರ್ವ ತಾನು ತಂದಿದ್ದ ತಲವಾರಿನಿಂದ ಅಬ್ದುಲ್ ಹಮೀದ್ ರವರಿಗೆ ಹಲ್ಲೆ ನಡೆಸಿದ್ದ. ತಲವಾರಿನಿಂದ ಕಡಿದ ಪರಿಣಾಮ ಎಡಕೈಗೆ ಗಾಯವಾಗಿತ್ತು. ಗಾಯಗೊಂಡ ಅಬ್ದುಲ್ ಹಮೀದ್ ರವರು ಬೊಬ್ಬೆ ಹಾಕಿ ಓಡಿದಾಗ ಆರೋಪಿಗಳು ಅದೇ ಬೈಕಿನಲ್ಲಿ ಹೋಗಿರುತ್ತಾರೆ. ಗಾಯಗೊಂಡ ಅಬ್ದುಲ್ ಹಮೀದ್ ರವರನ್ನು ಸೋಮಯಾಜಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ : 53/2025 ಕಲಂ:118(1), 351(3), 109 ಜೊತೆಗೆ 3(5) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


