ಉಡುಪಿ: ಪೊಲೀಸರೊಂದಿಗೆ ಕರ್ತವ್ಯದಲ್ಲಿದ್ದ ಸಮಯದಲ್ಲಿ ಅನುಚಿತವಾಗಿ ವರ್ತಿಸಿದ್ದಲ್ಲದೆ, ನಂತರದಲ್ಲಿ ಕರೆಮಾಡಿ ಜೀವಬೆದರಿಕೆ ಹಾಕಿರುವುದು ಹಾಗೂ ಹಲ್ಲೆ ನಡೆಸಿದ ಕಾರಣಕ್ಕೆ ಆರೋಪಿಯ ವಿರುದ್ಧ ಉಡುಪಿ ನಗರ ಠಾಣೆ ಹಾಗೂ ಕೋಟ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಮಾ. 24ರಂದು ಉಡುಪಿ ನಗರ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೆಬಲ್ ಮರಿಗೌಡ ಅವರು ರಾತ್ರಿ ಠಾಣಾ ಪ್ರಭಾರ ಕರ್ತವ್ಯದಲ್ಲಿರುವಾಗ ಉಡುಪಿ ಸಿಟಿ ಬಸ್ ನಿಲ್ದಾಣದ ಕಡೆಯಿಂದ ಕಲ್ಸಂಕ ಕಡೆಗೆ ಹೋಗುವ ಆಮ್ನಿ ಕಾರೊಂದರಲ್ಲಿ ಸುಮಾರು 4 ಜನರು ಸಿಟಿ ಬಸ್ ನಿಲ್ದಾಣದ ಬಳಿಯ ಮೆಡಿಕಲ್ ಶಾಪ್ವೊಂದರ ಎದುರು ರಸ್ತೆ ಬದಿಯಲ್ಲಿ ಮಲಗಿದ್ದ ಕೂಲಿ ಕಾರ್ಮಿಕರ ಮೇಲೆ ಬಿಯರ್ ಬಾಟಲಿ ಹಾಗೂ ರಾಡ್ಗಳನ್ನು ಎಸೆದು ಹೋಗಿದ್ದಾರೆ. ಅಲ್ಲದೆ ಇದೇ ವಠಾರದಲ್ಲಿ 2-3 ಬಾರೀ ಸುತ್ತಾಡುತ್ತಿದ್ದ ಬಗ್ಗೆ ಲಭಿಸಿದ ಮಾಹಿತಿ ಮೇರೆಗೆ ಆ ವಾಹನ ಮಾಲಕನಲ್ಲಿ ವಿಚಾರಿಸಲಾಗಿತ್ತು. ಬಳಿಕ ಆರೋಪಿ ಆದಮ್ ಎಂಬಾತ ಮರಿಗೌಡ ಅವರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಅದೇ ಫೋನ್ನಲ್ಲಿ ಮತ್ತೂರ್ವ ಆರೋಪಿ ಕೂಡ ಬೆದರಿಕೆ ಹಾಕಿದ್ದಾನೆ. ಬಳಿಕ ಮಾ. 25ಹಾಗೂ 26ರಂದು ಆರೋಪಿ ಅದಮ್ ಪುನಃ ಕರೆ ಮಾಡಿ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಮರಿಗೌಡ ಅವರು ಉಡುಪಿನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ನೋಟಿಸ್ ನೀಡಲು ಹೋದಾಗ ಹಲ್ಲೆ: ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾ. 27ರಂದು ಆರೋಪಿಗೆ ನೋಟಿಸ್ ನೀಡಲು ಹೋದಾಗ ಹಲ್ಲೆ ನಡೆಸಿದ್ದಾನೆ. ಆರೋಪಿಯು ಕೋಟ ಠಾಣೆ ವ್ಯಾಪ್ತಿಯವನಾಗಿದ್ದು, ಸಾಲಿಗ್ರಾಮದ ಬಳಿ ಹೊಟೇಲೊಂದರಲ್ಲಿದ್ದಾನೆ. ಉಡುಪಿ ನಗರ ಠಾಣೆಯಲ್ಲಿ ದಾಖಲಾದ ಪ್ರಕರಣದ ಬಗ್ಗೆ ಮಾಹಿತಿ ತಿಳಿಸಿದಾಗ ಆರೋಪಿಯು ನೋಟಿಸನ್ನು ತಿರಸ್ಕರಿಸಿ ಮರಿಗೌಡ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಹಾಕಿ ಒಮ್ಮೆಲೆ ಕೈಯಿಂದ ಹೊಟ್ಟೆಗೆ ಹಾಗೂ ಬಲ ಕೆನ್ನೆಗೆ ಹೊಡೆದು ದೂಡಿದ್ದಾನೆ. ಬಿಡಿಸಲು ಹೋದ ಸಿಬಂದಿಗೂ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ದೂಡಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಓಡಿಹೋಗಿದ್ದಾನೆ. ಆರೋಪಿಯ ಈ ಕೃತ್ಯಕ್ಕೆ ಹೊಟೇಲ್ನಲ್ಲಿದ್ದ ಇಮ್ತಿಯಾಝ್ ಎಂಬಾತನೂ ಸಹಕರಿಸಿದ್ದಾನೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.