ಹಾಸನ : ಚನ್ನರಾಯಪಟ್ಟಣ ಪಿಎಸ್ಐ ಕಿರಣ್ ಕುಮಾರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಯನ್ನು ಹಾಸನ ವಿಶೇಷ ಪೊಲೀಸ್ ತಂಡ ಪೂರ್ಣಗೊಳಿಸಿದೆ. ಅಲ್ಲದೇ ತನಿಖಾ ವರದಿಯನ್ನು ಸರ್ಕಾರಕ್ಕೆ ನೀಡಿದ್ದು, ಅತಿಯಾದ ಫೋನ್ ಕರೆಗಳ ಒತ್ತಡಕ್ಕೆ ಸಿಲುಕಿ, ಖಿನ್ನತೆಗೆ ಒಳಗಾಗಿ ಕಿರಣ್ ನೇಣಿಗೆ ಶರಣಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅರಸೀಕೆರೆ ಡಿವೈಎಸ್ಪಿ ಹಾಗೂ ವಿಶೇಷ ತನಿಖಾಧಿಕಾರಿ ನಾಗೇಶ್, ಕಿರಣ್ ಆತ್ಮಹತ್ಯೆ ಸಮಯದಲ್ಲಿ ಚನ್ನರಾಯಪಟ್ಟಣದಲ್ಲಿ ಹೆಚ್ಚು ಅಪರಾಧಗಳು ನಡೆದಿದ್ದವು. ಒಂದು ದಿನದ ಅಂತರದಲ್ಲಿ ಜೋಡಿ ಕೊಲೆಯಾಗಿತ್ತು. ಸಾರ್ವಜನಿಕರಿಂದ ಹಿಡಿದು ರಾಜಕಾರಣಿವರೆಗೆ ವಿವಿಧ ಮಂದಿ ಆಗ್ಗಾಗೆ ಹೆಚ್ಚು ಕರೆಮಾಡಿ ಕಾನೂನು ಸುವ್ಯವಸ್ಥೆ ಕುಸಿತದ ಬಗ್ಗೆ ಕಿರಣ್ರನ್ನು ಕೇಳುತ್ತಿದ್ದರು. ತನ್ನ ವಲಯ ವ್ಯಾಪ್ತಿಯಲ್ಲಿ ಹೀಗೆ ಆಯ್ತಲ್ಲ ಎಂದು ಕಿರಣ್ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಿದ್ದಾರೆ.
ಕಿರಣ್ ಇನ್ನೇನು ಪ್ರಮೋಷನ್ ಹಂತದಲ್ಲಿದ್ದರು. ಆಗಷ್ಟೆ ಅವರ ಇಲಾಖೆಯ ತನಿಖೆಗಳು ಮುಗಿದಿದ್ದವು. ಸರಣಿ ಕೊಲೆಗಳು ಎಲ್ಲಿ ತನ್ನ ಪ್ರಮೋಷನ್ಗೆ ಅಡ್ಡಿ ಆಗುತ್ತದೆಯೋ ಎಂಬ ಖಿನ್ನತೆಯೂ ಆಗಿರಬಹುದು. ಉತ್ತಮ ಅಧಿಕಾರಿಯನ್ನು ಕಳೆದುಕೊಂಡಿದ್ದೇವೆ. ಆತ ತನ್ನ ಮಗನ ಹುಟ್ಟುಹಬ್ಬಕ್ಕೂ ಕೇವಲ ಒಂದು ಗಂಟೆ ರಜೆ ಹಾಕಿದ್ದ. ಸದಾ ಕರ್ತವ್ಯಕ್ಕಾಗಿ ದುಡಿದಿದ್ದರು ಎಂದು ಹಾಸನ ಎಸ್ಪಿ ಶ್ರೀನಿವಾಸ್ ಗೌಡ ಸ್ಮರಿಸಿದ್ದಾರೆ.
ಜುಲೈ 31ರಂದು ಚನ್ನರಾಯಪಟ್ಟಣ ನಗರ ಠಾಣೆ ಪಿಎಸ್ಐ ಕಿರಣ್ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದರು.