ಚಿತ್ರದುರ್ಗ: ಪೋಕ್ಸೊ ಪ್ರಕರಣ ಸಂಬಂಧಂತೆ ಜೈಲಿನಲ್ಲಿರುವ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ವಿರುದ್ಧ ಪ್ರಮುಖ ಸಾಕ್ಷ್ಯಗಳ ವಿಚಾರಣೆ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ನಿಟ್ಟಿನಲ್ಲಿ 2ನೇ ಜಿಲ್ಲಾ ಹೆಚ್ಚುವರಿ ಮತ್ತು ಸಿವಿಲ್ ನ್ಯಾಯಾಲಯವು ಸ್ವಾಮೀಜಿ ಬಿಡುಗಡೆಗೆ ಸೋಮವಾರದಂದು ಆದೇಶಿಸಿತು.
2023ರ ನ.11ರಂದು ಹೈಕೋರ್ಟ್ ಪ್ರಕರಣ ಸಂಬಂಧ ಸ್ವಾಮೀಜಿಗೆ ಷರತ್ತು ಬದ್ಧ ಜಾಮೀನು ನೀಡಿದ್ದು, ನಂತರ ಸುಪ್ರೀಂಕೋರ್ಟ್ ಜಾಮೀನಿಗೆ ತಡೆ ನೀಡಿ ಸಾಕ್ಷ್ಯಗಳ ವಿಚಾರಣೆ ಮುಗಿಯುವವರೆಗೂ ಸ್ವಾಮೀಜಿಯನ್ನು ನ್ಯಾಯಂಗಬಂಧನದಲ್ಲಿ ಇರಿಸುವಂತೆ ಆದೇಶಿಸಿತ್ತು. 4 ತಿಂಗಳ ಒಳಗೆ ವಿಚಾರಣೆಯನ್ನು ಪೂರ್ಣಗೊಳಿಸಿವಂತೆ ಸೂಚಿಸಿದ್ದು, ವಿಚಾರಣೆ ಮುಗಿದ ನಂತರ ಜಾಮೀನಿಗಿದ್ದ ತಡೆಯು ತೆರವುಗೊಳ್ಳಲಿದೆ ಎಂದು ಆದೇಶದಲ್ಲೇ ತಿಳಿಸಿತ್ತು.
ಸ್ವಾಮೀಜಿ ಪರ ವಕೀಲ ವಿಶ್ವನಾಥಯ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಇಬ್ಬರು ಸಂತ್ರಸ್ರೆಯರು, 13 ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಂಡಿದ್ದು, ಹೀಗಾಗಿಯೇ ಹೈಕೋರ್ಟ್ ಜಾಮೀನಿಗೆ ಸುಪ್ರೀಂಕೋರ್ಟ್ ನೀಡಿದ್ದ ತಡೆ ತೆರವುಗೊಂಡಿದೆ. ಹೈಕೋರ್ಟ್ ನೀಡಿದ ಜಾಮೀನು ಮುಂದುವರಿಯಲಿದ್ದು ಸ್ವಾಮೀಜಿಗಳ ಬಿಡುಗಡೆಗೆ 2ನೇ ಜಿಲ್ಲಾ ಹೆಚ್ಚುವರಿ ಮತ್ತು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಗಂಗಾಧರ ಚನ್ನಬಸಪ್ಪ ಹಡಪದ ಆದೇಶಿಸಿದರು’ ಎಂದು ಮಾಹಿತಿ ನೀಡಿದರು.