ಉಡುಪಿ: ಸ್ಥಳ ಮಹಜರು ವೇಳೆ ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಪೋಕ್ಸೋ ಆರೋಪಿಯನ್ನು ಪೊಲೀಸರು ಲಾಠಿ ಏಟು ಕೊಟ್ಟು ಬಂಧಿಸಿದ ಘಟನೆ ಜುಲೈ 13 ರಂದು ಉಡುಪಿಯಲ್ಲಿ ನಡೆದಿದೆ.
ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಯಡಿ ದಾಖಲಾಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.12ರಂದು ಆರೋಪಿ ಉತ್ತರ ಪ್ರದೇಶ ಮೂಲದ ಮಣಿಪಾಲ ವಿ.ಪಿ.ನಗರದ ನಿವಾಸಿ ಮುಹಮ್ಮದ್ ದಾನೀಶ್(29) ನನ್ನು ಬಂಧಿಸಲಾಗಿದ್ದು, ಈತನನ್ನು ತನಿಖೆಗೆ ಒಳಪಡಿಸಿ ಜು.13ರಂದು ತನಿಖೆಯ ಬಗ್ಗೆ ಮಣಿಪಾಲ ತಾಂಗೋಡು 2ನೇ ಕ್ರಾಸ್ ಹಾಡಿ ಬಳಿ ಕೃತ್ಯವೆಸಗಿದ ಸ್ಥಳವನ್ನು ಪಂಚನಾಮೆಯನ್ನು ಮಾಡುವ ಕರೆದುಕೊಂಡು ಹೋಗಲಾಗಿತ್ತು.
ಈ ಸಮಯದಲ್ಲಿ ಆರೋಪಿ ಆತನಿಗೆ ಕೈಕೊಳ ಹಿಡಿದುಕೊಂಡಿದ್ದ ಸಿಬ್ಬಂದಿ ರಿತೇಶ್ ಅವರ ಎದೆಗೆ ಎರಡೂ ಕೈಗಳಿಂದ ಗುದ್ದಿ ದೂಡಿ ನೆಲಕ್ಕೆ ಬೀಳಿಸಿ ಅಲ್ಲಿಯೇ ಇದ್ದ ಕಲ್ಲನ್ನು ಎತ್ತಿಹಾಕಲು ಬಂದಿದ್ದಾನೆ. ಆಗ ಪೊಲೀಸ್ ನಿರೀಕ್ಷಕರರಾದ ರಾಮಚಂದ್ರ ನಾಯಕ್ ತಡೆದಾಗ ಅವರಿಗೂ ಒದೆಯಲು ಬಂದಿದ್ದನು. ಆಗ ಲಾಠಿಯಿಂದ ಆತನ ಕಾಲಿಗೆ ಹೊಡೆದು, ಅವನನ್ನು ನಿಯಂತ್ರಿಸಿದ್ದು, ಉಳಿದ ಸಿಬ್ಬಂದಿ ಆತನನ್ನು ಹಿಡಿದುಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಗಾಯಗೊಂಡ ಸಿಬ್ಬಂದಿ ರಿತೇಶ್ ಹಾಗೂ ಆರೋಪಿ ಮೊಹಮ್ಮದ್ ಡಾನೀಶ್ ಅವರನ್ನು ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಲಾಗಿದೆ


