ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ 4ನೇ ಅಲೆಯ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಸಭೆ ನಡೆಸಿದರು. ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಕೋವಿಡ್ ನಿಯಂತ್ರಣ ಸಂಬಂಧ ಪ್ರಧಾನಿ ಮೋದಿ ಜೊತೆ ಸಮಾಲೋಚನೆ ನಡೆಸಿದರು.
ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಈ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೋವಿಡ್ ನಿಯಮಗಳನ್ನು ದೇಶಾದ್ಯಂತ ಜನತೆ ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ಕರೆ ನೀಡಿದರು. ಕೋವಿಡ್ ಟೆಸ್ಟಿಂಗ್, ಟ್ರ್ಯಾಕಿಂಗ್ ಹಾಗೂ ಟ್ರೀಟ್ಮೆಂಟ್ಗೆ ಹೆಚ್ಚಿನ ಒತ್ತು ನೀಡುವಂತೆ ಪ್ರಧಾನಿ ಮೋದಿ ಸಲಹೆ ನೀಡಿದರು. ಕೊರೊನಾ 3ನೇ ಅಲೆ ಹಾಗೂ ಓಮಿಕ್ರಾನ್ ವೈರಸ್ ಅನ್ನು ಭಾರತ ಯಶಸ್ವಿಯಾಗಿ ಎದುರಿಸಿದೆ ಎಂದು ಹೇಳಿದ ಪ್ರಧಾನಿ ಮೋದಿ, ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಎಲ್ಲ ರಾಜ್ಯಗಳೂ ಸಮರ್ಥವಾಗಿ ನಿಭಾಯಿಸಿವೆ ಎಂದು ಹೇಳಿದರು.
ಇನ್ನು ದೇಶಾದ್ಯಂತ ಶೇ. 96ರಷ್ಟು ವಯಸ್ಕರಿಗೆ ಕೊರೊನಾ ವೈರಸ್ ಸೋಂಕು ನಿರೋಧಕ ಲಸಿಕೆಯ ಪ್ರಥಮ ಡೋಸ್ ನೀಡಲಾಗಿದೆ ಎಂದು ಹೇಳಿದ ಪ್ರಧಾನಿ ಮೋದಿ, ದೇಶಾದ್ಯಂತ ಶೇ. 85ರಷ್ಟು ಮಂದಿ ಎರಡನೇ ಡೋಸ್ ಕೂಡಾ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು. ಇನ್ನು 15 ವರ್ಷ ಮೇಲ್ಪಟ್ಟವರೂ ಎರಡನೇ ಡೋಸ್ ಲಸಿಕೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು. ಕೊರೊನಾದಿಂದ ರಕ್ಷಣೆ ಪಡೆಯಲು ಲಸಿಕೆಯೇ ಮುಖ್ಯ ಅಸ್ತ್ರ ಎಂದ ಪ್ರಧಾನಿ ಮೋದಿ, ಈಗ ಮಕ್ಕಳಿಗೂ ಲಸಿಕೆ ಸಿಗುತ್ತಿದೆ. 6 – 12 ವರ್ಷ ವಯಸ್ಸಿನವರೂ ಲಸಿಕೆ ಪಡೆಯಬಹುದು ಎಂದು ತಿಳಿಸಿದರು. ಇನ್ನು ದೇಶಾದ್ಯಂತ ಜನತೆ ಕೋವಿಡ್ ನಾಲ್ಕನೇ ಅಲೆ ಭೀತಿ ಹಿನ್ನೆಲೆಯಲ್ಲಿ ಬೂಸ್ಟರ್ ಡೋಸ್ ಪಡೆಯಬೇಕಾದ ಅಗತ್ಯತೆ ಇದೆ ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ.