ಕಳೆದ ಒಂದೂವರೆ ವರ್ಷದಲ್ಲಿ ಕರ್ನಾಟಕದಲ್ಲಿ ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಯ ಫಲಾನುಭವಿಗಳ ಸಂಖ್ಯೆ ಬಹಳಷ್ಟು ಕುಸಿತವಾಗಿದೆ ಎನ್ನಲಾಗಿದೆ.
ಈ ಕುರಿತಂತೆ ಲೋಕಸಭೆಯಲ್ಲಿ ಮೈಸೂರು ಸಂಸದ ಯದುವೀರ್ ಒಡೆಯರ್ ಮಂಗಳವಾರದಂದು ಕೃಷಿ ಖಾತೆ ರಾಜ್ಯ ಸಚಿವ ರಾಮನಾಥ್ ಠಾಕೂರ್ ಅವರಿಗೆ ಪ್ರಶ್ನೆ ಕೇಳಿದ್ದು, ಅವರು ಐದು ಲಕ್ಷದಿಂದ ಆರು ಲಕ್ಷದಷ್ಟು ಕುಸಿತವಾಗಿದೆ ಎಂದು ಉತ್ತರಿಸಿದ್ದಾರೆ. 2023ರ ಮಾರ್ಚ್ ನಲ್ಲಿ 13ನೇ ಕಂತಿನವರೆಗೆ ರಾಜ್ಯದ ಫಲಾನುಭವಿಗಳ ಸಂಖ್ಯೆ 49 ಲಕ್ಷದಷ್ಟಿದ್ದು, 14ನೇ ಕಂತಿನಲ್ಲೂ ಫಲಾನುಭವಿಗಳ ಸಂಖ್ಯೆ 49.34 ಲಕ್ಷ ಆಗಿತ್ತು. 15ನೇ ಕಂತಿನಲ್ಲಿ ಈ ಸಂಖ್ಯೆ 43.78 ಲಕ್ಷಕ್ಕೆ ಕುಸಿಯಿತು. ಆ ಬಳಿಕ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗಿಲ್ಲ. ಇನ್ನು ಪಿಎಂ– ಕಿಸಾನ್ ಯೋಜನೆಯಡಿ ಕೃಷಿಕರಿಗೆ ವಾರ್ಷಿಕ ₹6 ಸಾವಿರ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ. ಈ ಮೊತ್ತವನ್ನು ₹8 ಸಾವಿರ ಅಥವಾ ₹12 ಸಾವಿರಕ್ಕೆ ಏರಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.