ಬೆಳಗಾವಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ನನ್ನ ಪತ್ನಿ ಗೀತಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಅವರ ಗೆಲುವಿಗೆ ಬೆಂಬಲವಾಗಿ ನಿಲ್ಲುವುದು ನನ್ನ ಕರ್ತವ್ಯ. ಸಮಯ ಸಿಕ್ಕರೆ ಕಾಂಗ್ರೆಸ್ನ ಇತರೆ ಅಭ್ಯರ್ಥಿಗಳ ಪ್ರಚಾರಕ್ಕೆ ಹೋಗುತ್ತೇನೆ ಎಂದು ನಟ ಶಿವರಾಜ್ಕುಮಾರ್ ಹೇಳಿದರು.
ಅವರು ಸೋಮವಾರದಂದು ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ‘ಕರಟಕ ದಮನಕ’ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,`ಗೀತಾ ಅವರ ತವರು ಶಿವಮೊಗ್ಗ. ಅಲ್ಲೇ ಹುಟ್ಟಿ, ಶಿಕ್ಷಣ ಪಡೆದಿದ್ದಾರೆ. ಈ ಕಾರಣ, ಶಿವಮೊಗ್ಗದಿಂದ ಸ್ಪರ್ಧಿಸುತ್ತಾರೆ. ಈಗಾಗಲೇ ಅಲ್ಲಿ ಮನೆ ಮಾಡಲಾಗಿದೆ. ಗೀತಾ ಗೆಲ್ಲುವ ವಿಶ್ವಾಸವಿದೆ’ ಎಂದರು.
ಇನ್ನು ‘ಜನಪ್ರತಿನಿಧಿಯಾದರೆ ಜನಸೇವೆ ಮಾಡಲು ಹೆಚ್ಚು ಶಕ್ತಿಸಿಗುತ್ತದೆ. ಹಾಗಾಗಿ, ರಾಜಕಾರಣ ಅಗತ್ಯವಿದೆ. ಕಳೆದ ಗೀತಾ ಪರಾಭವಗೊಂಡಿದ್ದರೂ, ಈ ಬಾರಿ ಗೆಲ್ಲಿಸಲು ಯೋಜನೆ ರೂಪಿಸಲಾಗುತ್ತಿದೆ’ ಎಂದು ಹೇಳಿದರು.
‘ಉತ್ತರ ಕರ್ನಾಟಕದ ಮಹತ್ವದ ನೀರಿನ ಯೋಜನೆ ಕಳಸಾ ಬಂಡೂರಿ ಹೋರಾಟಕ್ಕೆ ನಟರೂ ಬರಬೇಕಿದೆ. ಈ ಹೋರಾಟ ಆರಂಭವಾದರೆ, ನಾನೇ ಖುದ್ದು ಎಲ್ಲ ನಟರನ್ನೂ ಕರೆದುಕೊಂಡು ಬರುತ್ತೇನೆ’ ಎಂದರು.