ಬೆಳ್ತಂಗಡಿ; ಧರ್ಮಸ್ಥಳ ಸೇವಾ ಸಹಕಾರಿ ಸಂಘದ ಪಿಗ್ಮಿ ಸಂಗ್ರಾಹಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ. ಜಗದೀಶ್ ರಾವ್(40) ಮೃತ ದುರ್ದೈವಿ. ಧರ್ಮಸ್ಥಳದ ತನ್ನ ಮನೆಯ ಸಮೀಪವೇ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿತ್ಯನಿಧಿ ಸಂಗ್ರಹದ ಜೊತೆಗೆ ಅವರು ಕನ್ಯಾಡಿಯಲ್ಲಿ ವಾಹನಗಳ ವಾಯು ಮಾಲಿನ್ಯ ತಪಾಸಣೆ ಕೇಂದ್ರ ಕೂಡ ಹೊಂದಿದ್ದರು. ಮನೆಯ ಪಕ್ಕದ ಶೆಡ್ ನ ಮೇಲ್ಚಾವಣಿಯ ಪಕ್ಕಾಸಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಜಗದೀಶ್ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರು. ಹಾಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.
ಇನ್ನು ಸ್ಥಳಕ್ಕೆ ಧರ್ಮಸ್ಥಳ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಮುಂದುವರೆಸಿದ್ದಾರೆ. ಕೆಲವು ದಿನಗಳ ಹಿಂದೆ ಇದೇ ಬ್ಯಾಂಕಿನ ಸಿಇಒ ಬ್ಯಾಂಕಿನ ಸಭಾಂಗಣದ ಒಳಗೆಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ಬೆನ್ನಿಗೇ ಬ್ಯಾಂಕಿನ ನಿರ್ದೇಶಕರು ಹಾಗೂ ಸಿಬ್ಬಂದಿಯ ವಿರುದ್ಧವೇ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಕೇಸು ದಾಖಲಾಗಿತ್ತು. ಬಳಿಕ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ ಕೂಡ ನೀಡಿತ್ತು. ಈ ಮಧ್ಯೆ ಅಲ್ಪ ದಿನಗಳ ಅಂತರದಲ್ಲಿ ಮತ್ತೋರ್ವ ನೇಣು ಬಿಗಿದುಕೊಂಡಿದ್ದು ಚರ್ಚೆಗೆ ಕಾರಣವಾಗಿದೆ.