ಚೆನ್ನೈ: ನಕಲಿ ಆರೋಗ್ಯ ಸಿಬ್ಬಂದಿ ಕೊಟ್ಟ ಮಾತ್ರೆ ತಿಂದು ಮೂವರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಈರೋಡ್ನಲ್ಲಿ ನಡೆದಿದೆ.
ಕರುಪ್ಪಂಕೌಂಡರ್ (72 ವರ್ಷ) ಹೆಸರಿನ ವ್ಯಕ್ತಿಯ ಮನೆಗೆ ಜೂನ್ 26ರಂದು ಬಂದ ಶಬರಿ ಹೆಸರಿನ ನಕಲಿ ಆರೋಗ್ಯ ಸಿಬ್ಬಂದಿ, ಮನೆಯಲ್ಲಿ ಎಲ್ಲರೂ ಹುಷಾರಾಗಿದ್ದಾರಾ ಎಂದು ವಿಚಾರಿಸಿದ್ದಾಳೆ. ಎಲ್ಲರೂ ಹುಷಾರಾಗಿದ್ದರೂ ಕೊರೊನಾ ಬರೋದಿಲ್ಲವೆಂದೇನಿಲ್ಲ. ಅದಕ್ಕಾಗಿ ಈ ಮಾತ್ರೆ ತಿನ್ನಿ, ಆಗ ನಿಮಗೆ ಇಮ್ಯುನಿಟಿ ಹೆಚ್ಚಾಗುತ್ತದೆ ಎಂದು ಹೇಳಿ ಒಂದಿಷ್ಟು ಮಾತ್ರೆ ಕೊಟ್ಟು ಹೋಗಿದ್ದಾಳೆ. ಆಕೆಯ ಮಾತನ್ನು ನಂಬಿದ ಕುಟುಂಬ ಮಾತ್ರೆ ತಿಂದಿದೆ ಹಾಗೂ ಮನೆ ಕೆಲಸದ ವ್ಯಕ್ತಿಗೂ ಮಾತ್ರೆ ಕೊಟ್ಟಿದ್ದಾರೆ.
ಮಾತ್ರೆ ತಿಂದ ಸ್ವಲ್ಪ ಸಮಯದಲ್ಲಿ ಎಲ್ಲರೂ ಅಸ್ವಸ್ಥರಾಗಿ ಬಿದ್ದಿದ್ದಾರೆ. ಗ್ರಾಮಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕರುಪ್ಪಂಕೌಂಡರ್ ಪತ್ನಿ ಮಲ್ಲಿಕಾ ಹಾಗೂ ಮಗಳು ದೀಪ ಮತ್ತು ಮನೆ ಕೆಲಸದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಕರುಪ್ಪಂಕೌಂಡರ್ ಸ್ಥಿತಿ ಕೂಡ ಗಂಭೀರವಾಗಿದೆ.
ಕರುಪ್ಪಂಕೌಂಡರ್ ಕೆಲವು ತಿಂಗಳ ಹಿಂದೆ ಆರ್ ಕಲ್ಯಾಣಸುಂದರಂ ವ್ಯಕ್ತಿಗೆ 15 ಲಕ್ಷ ರೂಪಾಯಿ ಸಾಲ ಕೊಟ್ಟಿದ್ದನಂತೆ. ಇತ್ತೀಚೆಗೆ ಆ ಹಣವನ್ನು ವಾಪಸು ಕೊಡು ಎಂದು ಕೇಳಿದ್ದಾನೆ. ಆದರೆ ಕಲ್ಯಾಣಸುಂದರಂ ಹಣ ವಾಪಸು ಮಾಡಲು ವಿಫಲವಾಗಿದ್ದಾನೆ. ಹಾಗಾಗಿ ಹೇಗಾದರೂ ಮಾಡಿ ಕರುಪ್ಪಂಕೌಂಡರ್ ಕುಟುಂಬವನ್ನೇ ನಾಶ ಮಾಡಬೇಕೆಂದು ಪ್ಲಾನ್ ಮಾಡಿದ್ದಾನೆ. ಶಬರಿಯನ್ನು ಬಳಸಿಕೊಂಡು ಆಕೆಯನ್ನು ಕರುಪ್ಪಂಕೌಂಡರ್ ಮನೆಗೆ ಕಳುಹಿಸಿ ವಿಷವನ್ನೇ ಇಮ್ಯುನಿಟಿ ಮಾತ್ರೆಗಳೆಂದು ಕೊಟ್ಟು ಅವಾಂತರ ಸೃಷ್ಟಿಸಿದ್ದಾನೆ. ಈ ವಿಚಾರ ತನಿಖೆಯಲ್ಲಿ ಬಯಲಾಗಿದ್ದು, ಶಬರಿ ಹಾಗೂ ಕಲ್ಯಾಣಸುಂದರಂ ಅನ್ನು ಬಂಧಿಸಲಾಗಿದೆ.