ಮಲವಂತಿಗೆ: ನದಿ ದಾಟುವಾಗ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಲವಂತಿಗೆ ಗ್ರಾಮದಲ್ಲಿ ಸೋಮವಾರದಂದು ನಡೆದಿದೆ.
ಮಲವಂತಿಗೆ ಗ್ರಾಮದ ನಾಗೊಟ್ಟು ನಿವಾಸಿ ಕಿನ್ನಿಗೌಡರ ಪುತ್ರ ಗಣೇಶ್(40.ವ) ಮೃತಪಟ್ಟ ದುರ್ದೈವಿ. ಇವರು ಸೋಮವಾರದಂದು ಸಂಜೆ ತಮ್ಮ ತೋಟದಲ್ಲಿ ಬಿದ್ದಿದ್ದ ಅಡಿಕೆಯನ್ನು ಹೆಕ್ಕಿ ಮನೆಗೆ ಹಿಂದಿರುಗಲು ಮಲ್ಲಕಜಕ್ಕೆ ಬಳಿಯ ಹಳ್ಳ ದಾಟುವ ಸಂದರ್ಭದಲ್ಲಿ ಆಕಸ್ಮಿಕವಾಗಿ ನದಿಗೆ ಜಾರಿ ಬಿದ್ದಿದ್ದರು.
ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ ಸ್ಥಳೀಯರಾದ ಮಲ್ಲ ಸುಧಾಕರ ಹೆಗ್ಡೆ, ತಾ.ಪಂ ಮಾಜಿ ಸದಸ್ಯ ಜಯರಾಮ ಆಲಂಗಾವು, ಸಹೋದರರು, ಮಲವಂತಿಗೆ ಗ್ರಾ.ಪಂ ಉಪಾಧ್ಯಕ್ಷ ಡಿ. ದಿನೇಶ್ ಗೌಡ ಹಾ ಸ್ಥಳೀಯರು ಅವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಅಲ್ಲೇ ಸ್ವಲ್ಪ ದೂರದಲ್ಲಿ ಬಂಡೆ ಕಲ್ಲಿನ ಸಂದಿನಲ್ಲಿ ಸಿಲುಕಿದ್ದ ಅವರನ್ನು ನೀರಿನಿಂದ ಮೇಲಕ್ಕೆತ್ತಲಾಗಿದ್ದು, ಅದಾಗಲೇ ಅವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ನಡೆಸಲಾಗಿದೆ.
ಮೃತರು ತಂದೆ ಕಿನ್ನಿ ಗೌಡ, ತಾಯಿ ಲಲಿತಾ, ಪತ್ನಿ ಲೀಲಾವತಿ ಇಬ್ಬರು ಮಕ್ಕಳಾದ ಸಾನಿಧ್ಯ, ಆದ್ಯಾ, ಸಹೋದರರಾದ ಜನಾರ್ದನ, ದಿನೇಶ್ ಸತೀಶ, ಸಹೋದರಿಯರಾದ ಶೋಭಾ, ಸುಮಿತ್ರಾ ಸಾವಿತ್ರಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.


