ಮಂಗಳೂರು: ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟ ಸುರತ್ಕಲ್ ಸಮೀಪದ ಇಡ್ಯದ 31ರ ಹರೆಯದ ಯುವಕನ ಅಂತ್ಯಸಂಸ್ಕಾರಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಘಟನೆ ಮಂಗಳೂರಿನ ಬೋಳಾರದಲ್ಲಿ ನಡೆದಿದೆ.
ಮೃತಪಟ್ಟ ಯುವಕನ ಅಂತ್ಯಸಂಸ್ಕಾರ ಇಂದು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಅಧಿಕಾರಿಗಳು ನಡೆಸಲು ಮುಂದಾಗಿದ್ದರು.
ಇಡ್ಯಾದ ಮಸೀದಿಯ ಕಬರ್ ಗುಂಡಿಯಲ್ಲಿ ನೀರು ತುಂಬಿದ್ದ ಕಾರಣ ಅಲ್ಲಿ ಶವ ಸಂಸ್ಕಾರ ನಡೆಸಲು ಸಾಧ್ಯವಾಗಿಲ್ಲ, ಹೀಗಾಗಿ ಅಧಿಕಾರಿಗಳು ಬೋಳಾರ ಬಳಿಯ ಮಸೀದಿಯಲ್ಲಿ ಅಂತ್ಯಸಂಸ್ಕಾರ ಮುಂದಾದರು. ಆದರೆ ಇದಕ್ಕೆ ಬೋಳಾರ ಮಸೀದಿ ಬಳಿ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪರಿಣಾಮ ಮಧ್ಯಾಹ್ನ 12ಗಂಟೆಯಿಂದಲೂ ಮೃತದೇಹವನ್ನು ಆ್ಯಂಬುಲೆನ್ಸ್ನಲ್ಲಿಯೇ ಇಡಲಾಗಿತ್ತು.ಇಡ್ಯಾ ಮಸೀದಿಯ ಮುಖಂಡರು ಸ್ಥಳೀಯರ ವಿರೋಧದ ನಡುವೆ ಬೋಳಾರ ಮಸೀದಿಯಲ್ಲಿ ಅಂತ್ಯಸಂಸ್ಕಾರ ಮಾಡುವುದು ಬೇಡ, ಯುವಕನ ಮೃತದೇಹವನ್ನು ಇಡ್ಯಾ ಮಸೀದಿಯಲ್ಲಿ ದಫನ್ ಮಾಡಲಾಗುವುದು ಎಂದು ಹೇಳಿದ್ದಾರೆ. ಇದರಿಂದ ಗಂಟೆಗಳ ಕಾಲ ಮೃತದೇಹವನ್ನು ದಫನ್ ಮಾಡಲು ಅಲೆದಾಡುತ್ತಿದ್ದ ಅಧಿಕಾರಿಗಳು ನಿಟ್ಟುಸಿರು ಬಿಡುವಂತಾಗಿದೆ.