ಮಧ್ಯಪ್ರದೇಶ: ಬಾವಿಗೆ ಬಿದ್ದ ಬಾಲಕನನ್ನು ರಕ್ಷಿಸಲು ಬಾವಿಕಟ್ಟೆಟ ಅಡ್ಡಗೋಡೆಯ ಸುತ್ತಲೂ ನಿಂತು ಇಣುಕುತ್ತಿದ್ದ ಗ್ರಾಮಸ್ಥರೆಲ್ಲ ಅದರೊಳಗೆ ಬಿದ್ದ ಘಟನೆ ಮಧ್ಯಪ್ರದೇಶದ ವಿಧಿಶಾ ಜಿಲ್ಲೆಯಲ್ಲಿ ನಡೆದಿದೆ.
ನಿನ್ನೆ ಗಂಜ್ ಬಸೊಡಾ ಎಂಬಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. 19 ಮಂದಿಯನ್ನು ರಕ್ಷಿಸಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯ ಶುಕ್ರವಾರವೂ ಮುಂದುವರಿದಿದೆ.
ನಿನ್ನೆ ರಾತ್ರಿ 9 ಗಂಟೆಗೆ ಹುಡುಗನೊಬ್ಬ ಬಾವಿಯೊಳಗೆ ಆಕಸ್ಮಿಕವಾಗಿ ಬಿದ್ದಿದ್ದಾನೆ. ಆತನ ರಕ್ಷಣೆಗೆ ಕೆಲವರು ಪ್ರಯತ್ನಿಸಿದ್ದಾರೆ. ಈ ಸಂದರ್ಭ ಗ್ರಾಮಸ್ಥರು ಬಾವಿಯತ್ತ ಆಗಮಿಸಿ ರಕ್ಷಣಾ ಕಾರ್ಯವನ್ನು ವೀಕ್ಷಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಬಾವಿಯ ಸುತ್ತಲು ಕಟ್ಟಿದ್ದ ಅಡ್ಡಗೋಡೆ ಕುಸಿದಿದ್ದರಿಂದ ಈ ದುರ್ಘಟನೆ ನಡೆದಿದೆ. ಸುಮಾರು 20 ಅಡಿ ನೀರು ತುಂಬಿದ್ದ, ಒಟ್ಟು 50 ಅಡಿ ಆಳದ ಬಾವಿಯಲ್ಲಿ ಹುಡುಗನ ರಕ್ಷಣಾ ಕಾರ್ಯವನ್ನು ಗ್ರಾಮಸ್ಥರು ನೋಡುತ್ತಿದ್ದರು. ಈ ಸಂದರ್ಭ ಇಣುಕುತ್ತಿದ್ದವರ ಭಾರ ಹೆಚ್ಚಾಗಿ ಅಡ್ಡಗೋಡೆ ಕುಸಿದಿರಬಹುದು ಎನ್ನಲಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ರಕ್ಷಣಾ ಕಾರ್ಯ ಸಾಗಿದೆ. ಘಟನೆ ಕುರಿತ ವರದಿಯನ್ನು ತರಿಸಿಕೊಳ್ಳುತ್ತಿದ್ದೇನೆ. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಮೃತ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಮತ್ತು ಚಿಕಿತ್ಸಾ ವೆಚ್ಛ ನೀಡುವುದಾಗಿ ಹೇಳಿದ್ದಾರೆ.


