ತಿರುಪತಿ: ಟಾಲಿವುಟ್ ನಟ, ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ 30 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಇದೇ ವೇಳೆ 1,10,00 ಡಿಡಿಯನ್ನು ತಿರುಪತಿಯಲ್ಲಿ ಆರ್ಎಸ್ಎಸ್ ಮುಖಂಡಿರಿಗೆ ಹಸ್ತಾಂತರ ಮಾಡಿದ್ದಾರೆ.
ತಿರುಪತಿ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಪವನ್ ಕಲ್ಯಾಣ್ ಅವರು ಶುಕ್ರವಾರ ಭೇಟಿ ನೀಡಿದ್ದಾರೆ. ಆ ವೇಳೆಯಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ₹30 ಲಕ್ಷ ದೇಣಿಗೆ ನೀಡುವುದಾಗಿ ಪವನ್ ಕಲ್ಯಾಣ್ ಘೋಷಿಸಿದ್ದಾರೆ.
ಇದೇ ಸಂದರ್ಭದಲ್ಲಿ ನಟ ಪವನ್ ಕಲ್ಯಾಣ್ ಅವರನ್ನು ಆರ್ಎಸ್ಎಸ್ ನಾಯಕರು ಹಾಗೂ ಮಾಜಿ ಸಚಿವ ಕಾಮಿನೇನಿ ಶ್ರೀನಿವಾಸ್ ಭೇಟಿ ಮಾಡಿದ್ದರು. ಈ ವೇಳೆ ದೇಣಿಗೆ ಹಣ ಹಸ್ತಾಂತರ ಮಾಡಿ ಮಾತನಾಡಿದ ಪವನ್ ಕಲ್ಯಾಣ್, ಮಾನವಕುಲಕ್ಕೆ ತಾಳ್ಮೆ, ಶಾಂತಿ ಮತ್ತು ಧೈರ್ಯದ ಹಾದಿಯನ್ನು ಶ್ರೀರಾಮ ತೋರಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮಕ್ಕಾಗಿ ಮಂದಿರವನ್ನು ನಿರ್ಮಿಸಲಾಗುತ್ತಿರುವುದು ಸಂತೋಷದ ಸಂಗತಿಯಾಗಿದೆ. ಈ ಕಾರ್ಯಕ್ಕೆ ಸಾಮಾನ್ಯ ಜನರು ಕೂಡ ದೇಣಿಗೆ ನೀಡಲು ಮುಂದಾಗಿದ್ದಾರೆ ಎಂದು ಹೇಳಿದರು.
ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾಮಗಾರಿಯು ಸದ್ಯ ಆರಂಭವಾಗಿದ್ದು, 36-40 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. ದೇವಾಲಯದ ನಿರ್ಮಾಣದ ಉಸ್ತುವಾರಿಯನ್ನು ‘ಎಲ್ ಅಯಂಡ್ ಟಿ’ ನೋಡಿಕೊಳ್ಳುತ್ತಿದೆ.