ಉಳ್ಳಾಲ: ರಮ್ ಕುಡಿದು, ಆಮ್ಲೆಟ್ ತಿಂದರೆ ಕೊರೋನಾ ಕಡಿಮೆ ಆಗುತ್ತದೆ ಎಂದು ವಿಡಿಯೋ ಮಾಡಿ ಸುದ್ದಿಯಾಗಿದ್ದ ಮಂಗಳೂರಿನ ಉಲ್ಲಾಳ ಭಾಗದ ಕೌಂನ್ಸಿಲರ್ ಆಗಿರುವ ರವಿಚಂದ್ರ ಗಟ್ಟಿ ಗೆ ಕೊರೋನಾ ಪಾಸಿಟಿವ್ ಆಗಿದೆ ಎಂಬ ಸುದ್ದಿ ಎಲ್ಲ ಕಡೆ ವೈರಲ್ ಆಗಿದೆ.
“ಒಂದು ಬಾಟಲ್ ರಮ್ ಕುಡಿಯಿರಿ. ಇದರ ಜೊತೆಗೆ ಎರಡು ಹಾಫ್ ಬಾಯ್ಲ್ಡ್ ಆಮ್ಲೆಟ್ ಮೇಲೆ ಕಾಳು ಮೆಣಸಿನ ಪೌಡರ್ ಉದುರಿಸಿ ತಿನ್ನಿ. ಹೀಗೆ ಮಾಡಿದರೆ ಕೊರೋನಾ ಹತ್ತಿರ ಸುಳಿಯುವುದೂ ಇಲ್ಲ. ನಾನು ಇದನ್ನು ರಾಜಕಾರಣಿಯಾಗಿ ಹೇಳುತ್ತಿಲ್ಲ, ಬದಲಿಗೆ ದೇಶದ ಒಬ್ಬ ಪ್ರಜೆಯಾಗಿ ಹೇಳುತ್ತಿದ್ದೆನೆ ”ಎಂದು ರವಿಚಂದ್ರ ಗಟ್ಟಿ ಹೇಳಿದ್ದರು.
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ‘ರಮ್ ವೈದ್ಯ’ ರವಿಚಂದ್ರ ಗಟ್ಟಿ, ‘ನನಗೆ ಕೊರೋನಾ ಬಂದಿದೆ ಎನ್ನುವುದು ಸುಳ್ಳು ಸುದ್ದಿಯಾಗಿದ್ದು, ನಾನು ಮನೆಯಲ್ಲೇ ಆರಾಮವಾಗಿದ್ದೇನೆ. ನನ್ನನ್ನು ಟೀಕೆ ಮಾಡುವವರು ಹಲವರು ಇದ್ದಾರೆ. ಟೀಕೆ ಮಾಡ್ತಾ ಇರ್ತಾರೆ ಅಷ್ಟೆ !!ನನಗೆ ಕೊರೊನ ಪಾಸಿಟಿವ್ ಇಲ್ಲ. ಬೆಳಿಗ್ಗೆ ಬೀಚಲ್ಲಿ ಸ್ನಾನ ಮಾಡಿ ಮದ್ಯಾಹ್ನ ಮನೆಯಲ್ಲಿ ಊಟ ಮಾಡ್ಕೊಂಡು ಆರಾಮವಾಗಿದ್ದೇನೆ ಎಂದು ಹೇಳಿದ್ದಾರೆ.
ರವಿಚಂದ್ರ ಗಟ್ಟಿ ಅವರು ಪಾನಕ ರವಿ ಎಂದೇ ಖ್ಯಾತಿ ಪಡೆದವರು. ಇವರು ಹಾಸ್ಯಪ್ರಜ್ಞೆಗೆ ಹೆಸರುವಾಸಿಯಾಗಿದ್ದಾರೆ. ಕಳೆದ ಬಾರಿ ಉಳ್ಳಾಲ ನಗರಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಟಿಕೆಟ್ ನಿರಾಕರಿಸಿದ್ದರಿಂದ ಕಾಂಗ್ರೆಸ್ನಿಂದ ಸ್ಪರ್ಧಿಸಿ ಅವರು ವಿಜಯಶಾಲಿಯಾಗಿದ್ದರು.