ಉಪ್ಪಿನಂಗಡಿ; ಆನ್ ಲೈನ್ ಮೂಲಕ ಮೊಬೈಲ್ ಆರ್ಡರ್ ಮಾಡಿದವರಿಗೆ ಹಳಸಿ ಆಹಾರ ಪಾರ್ಸೆಲ್ ಬಂಧ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯ ದೇವಸ್ಥಾನವೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿರುವ ಭವಾನಿ ಶಂಕರ್ ಅವರು ಇತ್ತೀಚೆಗೆ ತಮ್ಮ ಕುಟುಂಬ ಸದಸ್ಯರಿಗೆ ಮೂರು ವಿವೋ ಕಂಪನಿಯ ಮೊಬೈಲ್ ಫೋನ್ಗಳನ್ನು ಖರೀದಿಸಿದ್ದರು. ವಿವೋದ ಪ್ರತಿನಿಧಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೋರ್ವ ಕರೆ ಮಾಡಿ ” ಮೂರು ಮೊಬೈಲ್ ಫೋನ್ ಖರೀದಿಸಿದ್ದಕ್ಕೆ ತಮ್ಮ ಕಂಪನಿಯ ಅದೃಷ್ಟದ ಗ್ರಾಹಕ ಎಂದು ಆಯ್ಕೆ”ಯಾಗಿದ್ದೀರಿ ಹೀಗಾಗಿ 1785 ರೂ.ಗೆ 8800 ರೂ ಮೌಲ್ಯದ ಮೊಬೈಲ್ ಕಳುಹಿಸಲಾಗುವುದು. ಹಣ ತೆತ್ತು ಅಂಚೆ ಕಚೇರಿಯಿಂದ ಪಡೆದುಕೊಳ್ಳಿ’ ಎಂದು ತಿಳಿಸಿದ್ದರು.
ತಾನು ಫೋನ್ ಖರೀದಿಸಿದ ಕಾರಣ ಅದೃಷ್ಟ ಒಲಿದಿರುವುದು ನಿಜವಾಗಿರಬಹುದೆಂದು ನಂಬಿ ಅಂಚೆ ಕಚೇರಿಗೆ ಬಂದ ಪಾರ್ಸೆಲ್ ಅನ್ನು ಹಣ ತೆತ್ತು ಪಡೆದುಕೊಂಡರಲ್ಲದೆ, ಸಂದೇಹ ಬಗೆಹರಿಸಲು ಅಲ್ಲಿಯೇ ಪಾರ್ಸೆಲ್ ಅನ್ನು ತೆರೆದು ನೋಡಿದಾಗ ಕೆಟ್ಟು ಹೋದ ತಿಂಡಿಯ ಪೊಟ್ಟಣವನ್ನು ಪ್ಯಾಕ್ ಮಾಡಿ ಕಳುಹಿಸಿರುವುದು ಕಂಡು ಬಂದಿದೆ. ತಾನು ಫೋನ್ ಖರೀದಿಸಿರುವುದು ಈ ವಂಚಕರ ತಂಡಕ್ಕೆ ತಿಳಿದಿರುವ ಬಗೆ ಹೇಗೆ ಎನ್ನುವ ಪ್ರಶ್ನೆಯೊಂದಿಗೆ, ತಾನು ಮೋಸ ಹೋದಂತೆ ಇನ್ನ್ಯಾರೂ ಮೋಸ ಹೋಗಬಾರದೆಂದು ಪ್ರಕರಣವನ್ನು ಅವರು ಮಾಧ್ಯಮದ ಗಮನಕ್ಕೆ ತಂದಿದ್ದಾರೆ.