ಮಂಗಳೂರು: ನಿವೃತ್ತ ಇಂಜಿನಿಯರ್ ಒಬ್ಬರನ್ನು ಸೈಬರ್ ವಂಚಕರು ಬೆದರಿಸಿ ಹಣ ದೋಚಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
72 ವರ್ಷದ ನಿವೃತ್ತ ಇಂಜಿನಿಯರ್ ಗೆ ಸಿಬಿಐ ಮತ್ತು ಮುಂಬೈ ಕ್ರೈಂ ಬ್ರಾಂಚ್ ಪೊಲೀಸ್ ಅಧಿಕಾರಿ ಹೆಸರಿನಲ್ಲಿ ದೂರವಾಣಿ ಕರೆ ಮಾಡಿ ಬೆದರಿಸಿ 1 ಕೋಟಿ 60 ಲಕ್ಷ ರೂಪಾಯಿ ಹಣ ದೋಚಲಾಗಿದೆ.
ಮುಂಬೈನಿಂದ ಥಾಯ್ಲೆಂಡ್ ದೇಶಕ್ಕೆ ಕಳುಹಿಸಲ್ಪಟ್ಟಿರುವ ಪಾರ್ಸೆಲ್ ನಲ್ಲಿ ಡ್ರಗ್ಸ್ ಇದ್ದು, ಈ ಬಗ್ಗೆ ಮುಂಬೈ ಕ್ರೈಂ ಬ್ರಾಂಚ್ ನಲ್ಲಿ ತನಿಖೆ ನಡೆಯುತ್ತಿರುವುದಾಗಿ ದೂರವಾಣಿ ಕರೆ ಮಾಡಿದ್ದ ವಂಚಕರು ಬೆದರಿಸಿದ್ದರು ಎನ್ನಲಾಗಿದೆ.
ಪಾರ್ಸೆಲ್ ನಲ್ಲಿ ಐದು ಪಾಸ್ ಪೋರ್ಟ್, ಮೂರು ಕ್ರೆಡಿಟ್ ಕಾರ್ಡ್, 140 ಗ್ರಾಂ ಎಂಡಿಎಂಎ ಡ್ರಗ್ ಮತ್ತು ಲ್ಯಾಪ್ ಟಾಪ್ ಇರುವುದಾಗಿ ಹೇಳಿದ್ದು, ತನಿಖೆಗೆ ಸಹಕಾರ ನೀಡದ ಇದ್ದರೆ ವಿದೇಶದಲ್ಲಿರುವ ಮಗ ಮತ್ತು ಮಗಳನ್ನು ಇಂಟರ್ ಪೋಲ್ ಮೂಲಕ ಬಂಧಿಸಬೇಕಾಗುತ್ತದೆ ಎಂದು ಬ್ಲ್ಯಾಕ್ ಮೇಲ್ ಕೂಡಾ ಮಾಡಲಾಗಿತ್ತು ಎಂದು ಹೇಳಲಾಗಿದೆ.
ಅಲ್ಲದೇ, ಸಿಬಿಐ ನೋಟೀಸ್ ಎಂದು ಹಲವು ನೋಟೀಸ್ ಗಳನ್ನೂ ವಂಚಕರು ಕಳುಹಿಸಿದ್ದು, ಮೋಸದ ಬಗ್ಗೆ ಅರಿವಿಲ್ಲದೇ ಭಯಪಟ್ಟ ನಿವೃತ್ತ ಇಂಜಿನಿಯರ್ ಒಂದು ಕೋಟಿ ಹತ್ತು ಲಕ್ಷ ರೂಪಾಯಿ ಹಣ ಪಾವತಿಸಿದ್ದರು. ಮತ್ತೆ ವಂಚಕರು ಫೋನ್ ಕರೆ ಮಾಡಿದ್ದ ಹಿನ್ನೆಲೆಯಲ್ಲಿ ವಾಪಸ್ 50 ಲಕ್ಷ ರೂಪಾಯಿಯನ್ನು ನೀಡಿದ್ದರು.
ಮರುದಿನ ಸಂತ್ರಸ್ಥ ನಿವೃತ್ತ ಇಂಜಿನಿಯರ್ ಕರೆ ಮಾಡಿದಾಗ ವಂಚಕರಿಂದ ಯಾವುದೇ ಸ್ಪಂದನೆ ದೊರೆಯದಿದ್ದಾಗ ಘಟನೆ ಬಗ್ಗೆ ಪುತ್ರಿಯ ಗಮನಕ್ಕೆ ತಂದಾಗ ಮೋಸ ಹೋಗಿರುವುದು ತಿಳಿದು ಬಂದಿದೆ.
ನಂತರ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸೆನ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ