ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಲ್ಯ ಗ್ರಾಮದ ನಿನ್ನಿಕಲ್ಲು ನಿವಾಸಿ ಮುಗೇರ (ಪರಿಶಿಷ್ಠ ಜಾತಿ) ಸಮುದಾಯಕ್ಕೆ ಸೇರಿರುವ ವೃದ್ಧ ಮಹಿಳೆ ಡೀಕಮ್ಮ ಅವರು ಮೂಲ ಸೌಕರ್ಯಗಳಿಂದ ವಂಚಿತರಾಗಿರುವ ಪರಿಸ್ಥಿತಿಯ ಕಥೆಯಿದು. ಇವರ ಬಗ್ಗೆ ಜನಪ್ರತಿನಿಧಿಗಳು, ಸ್ಥಳೀಯ ಆಡಳಿತ ವರ್ಗದವರು ತೀರ ನಿರ್ಲಕ್ಷ್ಯ ತೋರುತ್ತಿದ್ದಾರೆಂಬ ಆರೋಪಗಳು ಕೇಳಿಬರುತ್ತಿದೆ.

ಬಂಟ್ವಾಳಕ್ಕೆ ಮದುವೆ ಮಾಡಿಕೊಟ್ಟ ಡೀಕಮ್ಮರ ಪತಿ ನಿಧನವಾದ ಬಳಿಕ 10-15 ವರ್ಷದಿಂದ ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಪಿಲ್ಯ ಗ್ರಾಮದ ನಿನ್ನಿಕಲ್ಲು ಎಂಬಲ್ಲಿ ವಾಸ್ತವ್ಯ ಹೊಡಿದ್ದಾರೆ. ಸಿಮೆಂಟ್ ಬ್ಲಾಕ್ ಗೋಡೆ ಹಾಗೂ ಸೀಮೆಂಟ್ ಸೀಟ್ನ ಮೇಲ್ಚಾವಣಿ ಹೊದಿಕೆಯ ಕುಠೀರವನ್ನು ಅವರ ಸಹೋದರ ನಿರ್ಮಿಸಿ ಕೊಟ್ಟಿದ್ದರು. ಅವರಿಗೆ ಮಕ್ಕಳಿಲ್ಲ ಏಕಾಂಗಿಯಾಗಿ ಸರಕಾರಿ ಭೂಮಿಯಲ್ಲಿ ಯಾವುದೇ ದಾಖಲೆಗಳು ಇಲ್ಲದೆ ಆ ಪುಟ್ಟ ಸೂರಿನಲ್ಲಿ ವೃದ್ಧೆ ಡೀಕಮ್ಮ ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದಾರೆ.
ಡೀಕಮ್ಮ ಬಳಿ ಯಾವುದೇ ದಾಖಲೆಗಳಿಲ್ಲ:
ದಾಖಲೆಗಳು ಇಲ್ಲದ ಸರಕಾರಿ ಭೂಮಿಯಲ್ಲಿ ಡೀಕಮ್ಮ ವಾಸ್ತವ್ಯ ಹೂಡಿದ್ದಾರೆ. ಅವರ ಬಳಿ, ಆಧಾರ್, ರೇಷನ್ ಕಾರ್ಡ್, ವೋಟರ್ ಐಡಿ ಸಹಿತ ಯಾವುದೇ ಗುರುತಿನ ಚೀಟಿ ಅವರ ಬಳಿ ಇಲ್ಲ. ಇದರಿಂದ ಅವರಿಗೆ ಪಿಂಚಣಿ ಕೂಡ ಸಿಗುತ್ತಿಲ್ಲ. ಗಂಡನ ಮರಣ ಬಳಿಕ ತವರಿಗೆ ಬಂದ ಡೀಕಮ್ಮ ತಮ್ಮಂದಿರೊಂದಿಗೆ ಇದ್ದರು. ಬಳಿಕ ತಮ್ಮಂದಿರು ಒಂದು ಸಣ್ಣ ಸೂರು ನಿರ್ಮಿಸಿಕೊಟ್ಟ ಅದರಲ್ಲಿ ಡೀಕಮ್ಮ ಜೀವನ ಸಾಗಿಸುತ್ತಿದ್ದಾರೆ. ಪ್ರಸ್ತುತ ವಾಸ್ತವ್ಯದ ಮನೆಯ ಪರಿಸರದಲ್ಲಿ ಹಿರಿಯರ ಜಾಗವಿದೆ ಅದು ಎಲ್ಲಿ ಹೇಗೆ ಇದೆ ಎಂದು ತಿಳಿದಿಲ್ಲ ಎಂಬುವುದು ವೃದ್ಧೆ ಡೀಕಮ್ಮರವರ ಮಾತುಗಳು.
ಮೂಲ ಸೌಕರ್ಯ ಇಲ್ಲ:
ಇವರಿಗೆ ಮೂಲಭೂತ ಸೌಕರ್ಯ ಮರಿಚೀಕೆಯಾಗಿದೆ. ವಾಸಕ್ಕೆ ಮನೆ, ಶೌಚಾಲಯ, ವಿದ್ಯುತ್ ಹಾಗೂ ಕುಡಿಯುವ ನೀರಿನ ಸಂಪರ್ಕ, ಕೆಲ ದಾಖಲೆಗಳು ಅಗತ್ಯವಾಗಿ ಡೀಕಮ್ಮ ಅಜ್ಜಿಗೆ ಆಗಬೇಕಿದೆ. ಇವರ ಈ ಸ್ಥಿತಿ ಕಂಡ ಸ್ಥಳೀಯ ಜನಸ್ನೇಹಿ ಸಂಘಟನೆ ಅವರ ಸೂರಿನ ಮುಂಭಾಗಕ್ಕೆ ಸಿಮೆಂಟ್ ಶೀಟ್ ಅಳವಡಿಸಿಕೊಟ್ಟಿದ್ದಾರೆ. ಹಾಗೇಯೆ ದಿನಸಿ, ಆಹಾರ ಸಾಮಗ್ರಿಗಳನ್ನು ಕೊಡುತ್ತಿದ್ದಾರೆ ಎನ್ನುತ್ತಾರೆ ವೃದ್ಧೆ ಡೀಕಮ್ಮ. ಒಟ್ಟಿನಲ್ಲಿ ಈ ಸಂಘಟನೆ ಅವರಿಗೆ ಆಹಾರಕ್ಕೆ ಹಾಗೂ ತಕ್ಕ ಮಟ್ಟಿನ ವ್ಯವಸ್ಥೆ ಮಾಡಿದೆ. ಸಮಸ್ಯೆ ಆಲಿಸಬೇಕಾದ ಜನಪ್ರತಿನಿಧಿಗಳು ಅವರನ್ನು ಗದುರುತ್ತಿದ್ದಾರೆ ಎನ್ನಲಾಗಿದೆ.
ಈ ಬಗೆಯ ದುಸ್ಥಿತಿಯಲ್ಲಿ ಜೀವನವನ್ನು ಸಾಗಿಸುತ್ತಿರುವ ವೃದ್ಧೆಯೊರ್ವರು ಜನಪ್ರತಿನಿಧಿಗಳು, ಅಳದಂಗಡಿ ಗ್ರಾಮ ಪಂಚಾಯತ್ ಕೂಡಲೇ ಎಚ್ಚೆತ್ತುಕೊಂಡು ಅವರ ಸಮಸ್ಯೆಗೆ ಪರಿಹಾರವನ್ನು ಸೂಚಿಸಬೇಕಾಗಿದೆ. ಯಾವುದಾದರೊಂದು ರೀತಿಯಲ್ಲಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕಾಗಿದೆ. ಇಲ್ಲದಿದ್ದರೆ ರಾಜ್ಯ ಸರಕಾರವು ಬಡವರಿಗಾಗಿ ಮತ್ತು ಪರಿಶಿಷ್ಠ ಜಾತಿ, ಪಂಗಡದವರಿಗೆ ಘೋಷಿಸುತ್ತಿರುವ ಆಶ್ರಯ ಮನೆಗಳು, ಶೌಚಾಲಯಗಳು, ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕ, ಕೇವಲ ಯೋಜನೆಯಾಗಿಯೇ ಉಳಿಯುತ್ತದೆ ಎಂಬುದನ್ನು ಜನಪ್ರತಿನಿಧಿಗಳು ಅರಿತುಕೊಳ್ಳಬೇಕಾಗಿದೆ.

ಸೂಕ್ತ ವ್ಯವಸ್ಥೆ ಕಲ್ಪಿಸಿ:
ನನ್ನನ್ನು ಬಂಟ್ವಾಳಕ್ಕೆ ಮದುವೆ ಮಾಡಿ ಕೊಟ್ಟಿದ್ದಾರೆ. ಗಂಡನ ಮರಣ ಬಳಿಕ 10-15 ವರ್ಷದಿಂದ ಇಲ್ಲಿಯೇ ವಾಸವಿದ್ದೇನೆ. ನನ್ನ ತಮ್ಮಂದಿರು ಇಲ್ಲಿ ಮನೆ ನಿರ್ಮಾಣ ಮಾಡಿ ಕೊಟ್ಟರು. ಬೀಡಿ ಕಟ್ಟಿ ಜೀವನ ಮಾಡುತ್ತಾ ಇದ್ದೇನೆ. ಮೊನ್ನೆಯಿಂದ ಸ್ಥಳೀಯರು ಒಟ್ಟಾಗಿ ದಿನಸಿ ಸಾಮಾಗ್ರಿಗಳನ್ನು ಕೊಟ್ಟಿದ್ದಾರೆ. ನನಗೆ ಮಕ್ಕಳು ಇಲ್ಲ, ನಾನು ಒಬ್ಬಳೇ ಇದ್ದೀನಿ. ರೇಷನ್ ಕಾರ್ಡ್ನಂತಹ ದಾಖಲೆಗಳು ಯಾವುದು ಇಲ್ಲ. ಪಂಚಾಯತ್ ಭೇಟಿ ನೀಡಿಲ್ಲ. ಚುನಾವಣಾ ಸಂದರ್ಭದಲ್ಲಿ ಕೂಡ ಬಂದಿಲ್ಲ. ಬಯಲನ್ನೇ ಶೌಚಾಲಯವನ್ನಾಗಿಸಿದ್ದೇನೆ. ನನಗೊಂದು ಮನೆ ನಿರ್ಮಾಣ ಮಾಡಿ ಕೊಟ್ಟರೆ ಉಪಕಾರವಾಗುತ್ತದೆ ಎಂದು ಹೇಳುತ್ತಾರೆ ವೃದ್ಧೆ ಡೀಕಮ್ಮ.
ಮೂಲ ಸೌಕರ್ಯ ಒದಿಸುವುದು ಗ್ರಾ.ಪಂ.ಜವಾಬ್ದಾರಿ: ದಾಖಲೆ ಇರಲಿ ಇಲ್ಲದಿರಲಿ, ಮೂಲತ ಸೌಕರ್ಯವನ್ನು ಕೊಡುವಂತಹದ್ದು ಪಂಚಾಯತ್ ಜವಾಬ್ದಾರಿಯಾಗಿದೆ. ಅವರಿಗೆ ಸುಮಾರು 70 ವರ್ಷ ಆಗುತ್ತ ಬಂದಿದೆ. ಪರಿಶಿಷ್ಟ ಜಾತಿಯವರು ಅವರಿಗೆ ಸಹಕಾರ ನೀಡುವಂತಹದ್ದು ಪಂಚಾಯತ್ ಧರ್ಮ. ಪಂಚಾಯತ್ಗೆ ಮಾಹಿತಿ ಇಲ್ಲವೆಂಬುದು ತಪ್ಪು. ವಾರ್ಡ್ಗೊಂದು ಸದಸ್ಯರಿರುತ್ತಾರೆ ಹಾಗಾಗಿ ಗೊತ್ತಿರಬಹುದು ಎಂಬುದು ನನ್ನ ಅಭಿಪ್ರಾಯ. ಯಾರು ಬಡತನದ ರೇಖೆಗಿಂತ ಕೆಳಗಿದ್ದಾರೆ ಅವರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿ ಕೊಡಬೇಕು ಎಂಬುದು ಸರ್ಕಾರದ ಉದ್ದೇಶ ಆದರೆ ಯಾವುದೇ ಸರ್ಕಾರವಿರಲಿ ಅದನ್ನು ಮಾಡಿಕೋಡಬೇಕು ಎಂದು ನಾನು ಭಾವಿಸುತ್ತೇನೆ. ಬಯಲು ಶೌಚಾಲಯ ಮಾಡಲೇ ಬಾರದು, ಆ ಪರಿಸ್ಥಿತಿ ನಮ್ಮ ಗ್ರಾಮದಲ್ಲೂ ಇದೇ ಎಂದಾದರೆ ಅದು ಪಂಚಾಯತ್ಗೆ ಬಿಟ್ಟದ್ದು. ಇನ್ನಾದರೂ ತಿಳಿದುಕೊಂಡು ಶೌಚಾಲಯ ವ್ಯವಸ್ಥೆ ನೀಡಬಹುದು. ವಸತಿ, ಶೌಚಾಲಯ, ಕೋಣೆ, ಬೆಳಕು, ನೀರು ಸಂಪರ್ಕ ನೀಡಿ ನೆಮ್ಮದಿಯ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಸ್ಥಳೀಯ ನಿವಾಸಿ ಕೇಶವರವರು ಮಾಹಿತಿ ನೀಡಿದರು.
ಬಯಲು ಶೌಚಾಲಯ:
ಸ್ವಚ್ಛಭಾರತದ ಕಲ್ಪನೆಯಿಂದ ಗ್ರಾಮ ಪಂಚಾಯತ್ ಪ್ರತಿಯೊಬ್ಬರಿಗೂ ಶೌಚಾಲಯವನ್ನು ನಿರ್ಮಿಸಿಕೊಡಲೇಬೇಕು. ಆದರೆ ಇಲ್ಲಿ ಗ್ರಾಮ ಪಂಚಾಯತ್ನವರಾಗಲೀ, ಜನಪ್ರತಿನಿಧಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಿ ಇವರ ಸಮಸ್ಯೆಗಳತ್ತ ಗಮನ ಹರಿಸಿಲ್ಲ. ಬಯಲನ್ನೇ ತಮ್ಮ ಶೌಚಾಗೃಹವನ್ನಾಗಿಸಿ ಕೊಂಡಿದ್ದಾರೆ. 8X12 ಸುತ್ತಳತೆಯ ಪುಟ್ಟ ಕುಠೀರ ಒಂದು ಕೊಠಡಿಯನ್ನು ಒಳಗೊಂಡಿದೆ. ಅದರಲ್ಲಿಯೇ ಅಡುಗೆ ಕೊಣೆ, ಒಂದೇಡೆ ಕಟ್ಟಿಗೆ ರಾಶಿ, ಸಾಮಾಗ್ರಿಗಳು, ಹಬೆ ಬರುವ ನೆಲದಲ್ಲಿ ಗೋಣಿ ಚೀಲಗಳನ್ನು ಹಾಕಿಕೊಂಡು ಮಲಗಬೇಕಾದ ಶೋಚನೀಯ ಸ್ಥಿತಿ. ಗಂಜಿ ಅನ್ನ ಸೇವಿಸಿಕೊಂಡು ಒಂದು ಹೊತ್ತಿನ ಊಟಕ್ಕೂ ಕಷ್ಟವಿದೆ ಎಂದು ಕಣ್ಣೀರು ಇಡುತ್ತಿದ್ದಾರೆ ಡೀಕಮ್ಮ. ಮನೆಯ ಸುತ್ತಮುತ್ತಲು ಹುಲ್ಲುಗಳ ಬೆಳೆದುಕೊಂಡಿದ್ದು ಅವರು ಮಂದ ಕಣ್ಣಿನಲ್ಲಿ ಬೀಡಿ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ.