ಮಂಗಳೂರು: ಇಲ್ಲಿನ ಉಚ್ಚಿಲದ ಬಟ್ಟಪಾಡಿ ಕಡಲ ತೀರದಲ್ಲಿ ಮುಳುಗಡೆಯಾದ ವಿದೇಶಿ ಹಡಗಿನಿಂದ ಸಣ್ಣ ಪ್ರಮಾಣದಲ್ಲಿ ತೈಲ ಸೋರಿಕೆ ಕಂಡು ಬಂದಿದ್ದು, ತೈಲ ಸೋರಿಕೆಯಿಂದ ಕೆಲವರಲ್ಲಿ ಆರೋಗ್ಯ ಸಮಸ್ಯೆ ಎದುರಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಮಂಗಳೂರಿನ ಉಚ್ಚಿಲದಲ್ಲಿ ವಿದೇಶಿ ಹಡಗಿನಿಂದ ತೈಲ ಸೋರಿಕೆ ವಿಚಾರ ಸಂಬಂಧಿಸಿ ಸಣ್ಣ ಪ್ರಮಾಣದ ತೈಲ ಸೋರಿಕೆಯಿಂದ ಸಮುದ್ರ ತೀರದ ನಿವಾಸಿಗಳಲ್ಲಿ ಆತಂಕ ಎದುರಾಗಿದೆ. ತೀರ ಪ್ರದೇಶದಲ್ಲಿ ತೈಲದ ಕೆಟ್ಟ ವಾಸನೆಯಿಂದ ಸ್ಥಳೀಯರಲ್ಲಿ ಆತಂಕ ಮೂಡಿದ್ದು, ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಸ್ಥಳೀಯರು ಆಳಲು ತೋಡಿಕೊಂಡಿದ್ದಾರೆ. ಕಳೆದ ಮೂರು ದಿನಗಳಿಂದ ತೈಲ ಸೋರಿಕೆಯಾಗಿ ವಾಸನೆ ಬರ್ತಿದೆ. ಸಮುದ್ರದಲ್ಲಿ ತೈಲ ಸೇರಿಕೊಂಡು ಬಾವಿ ನೀರು ಸೇರಿ ಜಲಮೂಲಗಳು ಕಲುಷಿತವಾಗಿದೆ. ಇದರಿಂದ ಇಲ್ಲಿನ ಕೆಲ ಮನೆಗಳ ನಿವಾಸಿಗಳಿಗೆ ಬೇಧಿಯಾಗ್ತಿದೆ. ನಾಲ್ಕೈದು ಜನರಿಗೆ ಸಣ್ಣಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಮೀನುಗಾರಿಕೆ ತೆರಳಲಾಗದೇ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ. ಈ ಭಾಗದ ಸಮುದ್ರದಲ್ಲಿ ಇಡೀ ಮತ್ಸ್ಯ ಸಂಕುಲ ನಾಶದ ಭೀತಿ ಎದುರಾಗಿದೆ. ಹಡಗು ಇಲ್ಲಿಗೆ ಯಾಕೆ ಬಂತು, ಅದನ್ನ ಯಾಕೆ ತೆರವು ಮಾಡ್ತಿಲ್ಲ ಗೊತ್ತಿಲ್ಲ. ಕೋಸ್ಟ್ ಗಾರ್ಡ್ ನವರು ಮೊನ್ನೆ ಎರಡು ದಿನ ಸುತ್ತಾಡಿದ್ದು ಬಿಟ್ಟರೆ ಮತ್ತೆ ಬಂದಿಲ್ಲ. ನಮ್ಮ ಸಮಸ್ಯೆ ಕೇಳೋಕೆ ಯಾರೊಬ್ಬರೂ ಇಲ್ಲಿಗೆ ಬಂದಿಲ್ಲ. ಮತ್ತಷ್ಟು ತೈಲ ಸೋರಿಕೆಯಾದ್ರೆ ಮತ್ತಷ್ಟು ಆತಂಕವಿದೆ ಅಂತ ಅಸಮಾಧಾನ ಹೊರಹಾಕಿದ್ದಾರೆ.
ಹಡಗಿನಿಂದ ಸಣ್ಣ ಪ್ರಮಾಣದಲ್ಲಿ ತೈಲ ಸೋರಿಕೆ ಪತ್ತೆಯಾಗಿದ್ದು, ಸಮುದ್ರದಲ್ಲಿ ಕಪ್ಪು ಬಣ್ಣದಲ್ಲಿ ಗೋಚರವಾದ ಸಣ್ಣ ಪ್ರಮಾಣದ ತೈಲ ಸೋರಿಕೆ ಆತಂಕ ಸೃಷ್ಟಿಸಿದೆ. ಸುಮಾರು 220 ಮೆಟ್ರಿಕ್ ಟನ್ ತೈಲ ಹೊಂದಿರುವ ವಿದೇಶಿ ಹಡಗು ಇದಾಗಿದ್ದು, ಕಳೆದ ಮೂರು ದಿನಗಳ ಹಿಂದೆಯೇ ತೈಲ ಸೋರಿಕೆಯಾಗುತ್ತಿರುವ ಮಾಹಿತಿ ಲಭ್ಯವಾಗಿದೆ. ಹಡಗಿನ ಡರ್ಟಿ ವಾಟರ್ ಟ್ಯಾಂಕಿನಿಂದ ಸಣ್ಣ ಪ್ರಮಾಣದಲ್ಲಿ ತೈಲ ಸೋರಿಕೆ ಶಂಕೆ ವ್ಯಕ್ತವಾಗಿದ್ದು, ಸದ್ಯ ಉಳ್ಳಾಲ ಕಡಲ ತೀರದಲ್ಲಿ ಮೀನುಗಾರಿಕೆ ನಿಷೇಧಿಸಲಾಗಿದೆ. ಜೂ.23ರಂದು ಮುಳುಗಡೆಯಾದ ಸಿರಿಯಾ ದೇಶದ ಎಂ.ಬಿ.ಪ್ರಿನ್ಸೆಸ್ ಮಿರಲ್ ವ್ಯಾಪಾರಿ ಹಡಗು ಇದಾಗಿದ್ದು, ಚೀನಾದಿಂದ ಲೆಬನಾನ್ ಗೆ 8 ಸಾವಿರ ಟನ್ ಸ್ಟೀಲ್ ಕಾಯಿಲ್ ಸಾಗಿಸಿತ್ತಿತ್ತು ಎನ್ನಲಾಗಿದೆ. ಸದ್ಯ ತೈಲ ಸೋರಿಕೆ ಬೆನ್ನಲ್ಲೇ ಮತ್ತೆ ವಿದೇಶಿ ಹಡಗಿನ ಸುತ್ತಮುತ್ತ ಇಂಡಿಯನ್ ಕೋಸ್ಟ್ ಗಾರ್ಡ್ ಕಣ್ಗಾವಲು ಆರಂಭಿಸಿದೆ. ಹಡಗು ಮತ್ತು ಮಿನಿ ಜೆಟ್ ವಿಮಾನದ ಮೂಲಕ ಮತ್ತೆ ಮಾನಿಟರ್ ಮಾಡಲಾಗ್ತಿದ್ದು, ಎರಡು ಸಣ್ಣ ಹಡಗಿನ ಮೂಲಕ ಮುಳುಗಿದ ಹಡಗಿನ ಸುತ್ತ ಕಣ್ಗಾವಲು ಇರಿಸಲಾಗಿದೆ. ಮಿನಿ ಜೆಟ್ ವಿಮಾನ ಹಾರಾಟದ ಮೂಲಕ ಮತ್ತೆ ಕಣ್ಗಾವಲು ಇಡಲಾಗಿದೆ.