ಬೆಳ್ತಂಗಡಿ: ಕಳೆದ ಎಂಟು ದಿನಗಳಿಂದ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. 6ನೇ ವೇತನ ಆಯೋಗ ಜಾರಿ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಈ ನಡುವೆ ಮುಷ್ಕರ ನಿರತ ರಾಜ್ಯ ಸಾರಿಗೆ ಸಂಸ್ಥೆಯ ನೌಕರರಿಗೆ ಬೆಂಬಲವಾಗಿ ನೌಕರರ ಕುಟುಂಬಸ್ಥರಿಂದ ಬೆಳ್ತಂಗಡಿಯಲ್ಲಿ KSRTC ಕಂಡೆಕ್ಟರ್ ನ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಘಟನೆ ನಡೆದಿದೆ.
ನಗರದ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿದ ಬಳಿಕ ಸಾರಿಗೆ ನೌಕರರ ಕುಟುಂಬಸ್ಥರು ಬೆಳ್ತಂಗಡಿ ಬಸ್ ನಿಲ್ದಾಣಕ್ಕೆ ಬಂದು ಸಾರಿಗೆ ಸಂಸ್ಥೆಯ ಬಸ್ ಅನ್ನು ತಡೆದಿದ್ದರು.
ಏನಿದು ಪ್ರಕರಣ?
ಮಂಗಳೂರು ಘಟಕದ ನಿರ್ವಾಹಕ ಉಮೇಶ ಕಮಲಾಪುರ ಅವರು ಬೆಳ್ತಂಗಡಿ ಠಾಣೆಗೆ ದೂರು ನೀಡಿ ತಾನು ಎಪ್ರಿಲ್ 12ರಂದು ಮಧ್ಯಾಹ್ನ ಮಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಬಸ್ಸಿನಲ್ಲಿ ಕಾರ್ಯನಿರ್ಹಿಸುತ್ತಿದ್ದ ವೇಳೆ ಬೆಳ್ತಂಗಡಿ ಯಲ್ಲಿ ಬಸ್ಗಿಗೆ ಹತ್ತಿದ ಇಬ್ಬರು ಅಪರಿಚಿತ ಮಹಿಳೆಯರು ಟಿಕೇಟು ತೆಗೆಯಲು ನಿರಾಕರಿಸಿದ್ದಲ್ಲದೆ ಇತರರಿಗೆ ಟಿಕೇಟು ನೀಡಲು ಅಡ್ಡಿಪಡಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿಯೂ ಈ ಬಗ್ಗೆ ಬೆಳ್ತಂಗಡಿ ಟಿ.ಸಿ ಯ ಬಳಿ ಹೇಳಲು ಹೋಗಿ ಹಿಂತಿರುಗಿ ಬರುವ ವೇಳೆಗೆ ಅವರು ಬಸ್ಸಿನಿಂದ ಇಳಿದು ಹೋಗಿದ್ದರು ಎಂದು ದೂರು ನೀಡಿದ್ದಾರೆ. ಕರ್ತವ್ಯದಲ್ಲಿದ್ದ ಕಾರಣ ತಡವಾಗಿ ದೂರು ನೀಡಿರುವುದಾಗಿಯೂ ತಿಳಿಸಿದ್ದಾರೆ. ಇದರಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.