ಬೆಂಗಳೂರು: ನಿನ್ನೆಯಷ್ಟೇ ವೈಎಸ್ ವಿ ದತ್ತಾ ಅವರಿಗೆ ಜೆಡಿಎಸ್ ಪಕ್ಷದಿಂದ ಕಡೂರು ಕ್ಷೇತ್ರಕ್ಕೆ ಟಿಕೆಟ್ ಕೂಡ ಘೋಷಣೆ ಮಾಡಲಾಗಿತ್ತು. ಇಂತಹ ಜೆಡಿಎಸ್ ಅಭ್ಯರ್ಥಿಗೆ ಚುನಾವಣೆ ಹೊತ್ತಿನಲ್ಲೇ ಚೆಕ್ ಬೌನ್ಸ್ ಪ್ರಕರಣದಲ್ಲಿ ಜಾಮೀನು ರಹಿತ ವಾರೆಂಟ್ ಅನ್ನು ಕೋರ್ಟ್ ಜಾರಿಗೊಳಿಸಿ ಬಿಗ್ ಶಾಕ್ ನೀಡಿದೆ.
ಮಾಜಿ ಶಾಸಕ ವೈಎಸ್ ವಿ ದತ್ತಾ ವಿರುದ್ಧ ಸಿಎಸ್ ಸೋಮೇಗೌಡ ಎಂಬುವರು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಇಂದು ವಿಚಾರಣೆ ನಡೆಸಿದಂತ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನ್ಯಾಯಾಧೀಶರಾದ ಜೆ.ಪ್ರೀತ್ ಅವರು, ಮಾಜಿ ಶಾಸಕ ವೈಎಸ್ ವಿ ದತ್ತಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದ್ದಾರೆ. ಏಪ್ರಿಲ್ 26ರಂದು ನ್ಯಾಯಾಲಯಕ್ಕೆ ವೈ ಎಸ್ ವಿ ದತ್ತಾ ಅವರನ್ನು ಹಾಜರುಪಡಿಸುವಂತೆ ಸೂಚಿಸಿದ್ದಾರೆ.
ಅಂದಹಾಗೇ ಮಾಜಿ ಶಾಸಕ ವೈಎಸ್ ವಿ ದತ್ತಾ ಏಪ್ರಿಲ್ 15ರಂದು ದೂರುದಾರಿಂದ ಪಡೆದ ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರು. ಆದ್ರೇ ಇಂದು ಅದರಂತೆ ಪಾವತಿಸಬೇಕಾಗಿತ್ತು. ಪಾವತಿಸದ ಕಾರಣ, ವಿಚಾರಣೆ ನಡೆಸಿದಂತ ನ್ಯಾಯಪೀಠದ ಮುಂದೆ ನಮ್ಮ ಕಕ್ಷಿದಾರರಿಗೆ ಖುದ್ದು ವಿಚಾರಣೆಗೆ ಹಾಜರಿಗೆ ವಿನಾಯ್ತಿ ನೀಡುವಂತೆ ಕೋರಿದರು. ಈ ಮನವಿ ತಿರಸ್ಕರಿಸಿರುವಂತ ನ್ಯಾಯಾಲಯವು, ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿದೆ.