ಮಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಜೊತೆ ಯಾವುದೇ ರಾಜಕೀಯ ಚರ್ಚೆ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಕಾವೇರಿ ಅತಿಥಿಗೃಹದ ಬಳಿ ಪ್ರತಿಕ್ರಿಯೆ ನೀಡಿದ ಸಿಎಂ, ಡಿ.ಕೆ. ಶಿವಕುಮಾರ್ ದೆಹಲಿಗೆ ಹೋದರೆ ಹೋಗಲಿ ಪಾಪ, ಬೇಡ ಅಂದವರು ಯಾರು ಎಂದು ಹೇಳಿದ್ದಾರೆ.ನಾನು ದೆಹಲಿಗೆ ಹೋಗಲ್ಲ, ಕರೆದರೆ ಮಾತ್ರ ಹೋಗುತ್ತೇನೆ, ಆದರೆ ನನಗೆ ಈವರೆಗೆ ದೆಹಲಿಗೆ ಕರೆದಿಲ್ಲ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಿಎಂ ಮತ್ತು ಡಿಸಿಎಂ ನಿವಾಸಗಳಲ್ಲಿ ಕೆ.ಸಿ. ವೇಣುಗೋಪಾಲ್ ಸೂಚನೆಯಂತೆಯೇ ಉಪಹಾರ ಸಭೆ ಆಯೋಜನೆಗೊಂಡಿದ್ದವು. ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಮೊದಲ ಬಾರಿಗೆ ಇಂದು ಸಿಎಂ ಸಿದ್ದರಾಮಯ್ಯ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ್ದರು.
ಹೀಗಾಗಿ ಇಂದು ಸಿದ್ಧರಾಮಯ್ಯ ಮತ್ತು ವೇಣುಗೋಪಾಲ್ ನಡುವೆ ರಾಜಕೀಯ ಚರ್ಚೆ ನಡೆಯಬಹುದು ಎಂಬ ನಿರೀಕ್ಷೆ ಹೆಚ್ಚಾಗಿತ್ತು. ಆದರೆ ಮಂಗಳ ಗಂಗೋತ್ರಿಯ ಕಾವೇರಿ ಗೆಸ್ಟ್ ಹೌಸ್ ನಲ್ಲಿ ಸಚಿವರ ಜೊತೆಯಲ್ಲಿ ಸಿದ್ಧರಾಮಯ್ಯ ಮತ್ತು ವೇಣುಗೋಪಾಲ್ ಮಧ್ಯಾಹ್ನದ ಭೋಜನವನ್ನಷ್ಟೇ ಮಾಡಿದ್ದರೆ ಎಂದು ಹೇಳಲಾಗಿದೆ.


