ಬೆಂಗಳೂರು: ಒಂದರಿಂದ ಏಳನೇ ತರಗತಿಯವರೆಗೆ ಆನ್ಲೈನ್ ತರಗತಿ ನಡೆಸದಿರಲು ರಾಜ್ಯ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ. ಇಂದು ವಿಧಾನಸೌಧದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ರಾಜ್ಯದ ಖಾಸಗಿ ಶಾಲೆಗಳು ಶುಲ್ಕದ ಆಸೆಗೆ ಬಿದ್ದು ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲಾ ವಿದ್ಯಾಥಿರ್ಗಳ ಮೇಲೆ ಹೊರಿಸಿದ್ದ ಆನ್ಲೈನ್ ಪಾಠದ ಹೊರೆಯನ್ನು ಈಗಾಗಲೇ ಸರ್ಕಾರ ಇಳಿಸಿದೆ. ಇದರ ಮುಂದುವರಿದ ಭಾಗವಾಗಿ 6 ಮತ್ತು 7ನೇ ತರಗತಿಯ ಮಕ್ಕಳಿಗೂ ಆನ್ಲೈನ್ ಗುಮ್ಮದಿಂದ ಮುಕ್ತಿ ನೀಡುವ ಸಂಬಂಧ ಇಂದಿನ(ಗುರುವಾರ) ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
1 ರಿಂದ 7ನೇ ತರಗತಿವರೆಗೆ ಆನ್ಲೈನ್ ತರಗತಿಗಳು ನಡೆಯುವುದಿಲ್ಲ. ಇದು ಸಂಪುಟದ ತೀರ್ಮಾನವಾಗಿ ಇದ್ದು, ಕೂಡಲೇ ಶಿಕ್ಷಣ ಇಲಾಖೆಯ ಮೂಲಕ ಈ ಮಾಹಿತಿಯನ್ನು ತಲುಪಿಸಲಾಗುತ್ತದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
ಐದನೇ ತರಗತಿಯವರೆಗೆ ಆನ್ಲೈನ್ ತರಗತಿ ನಡೆಸಬಾರದು ಎಂದು ಇದಕ್ಕೂ ಮುನ್ನ ತೀರ್ಮಾನಿಸಲಾಗಿತ್ತು. ಶಿಕ್ಷಣ ಇಲಾಖೆ ಕೈಗೊಂಡಿದ್ದ ತೀರ್ಮಾನ ಎಂದು ಚರ್ಚಿಸಿದ ತರಗತಿವರೆಗೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.