ನಟಿ ನಿವೇದಿತಾ ಗೌಡ ಅವರು ಸೈಬರ್ ದೌರ್ಜನ್ಯ ಮತ್ತು ಟ್ರೋಲಿಂಗ್ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕುರಿತಂತೆ ಅವರು ಸುರ್ದೀರ್ಘವಾದ ಪತ್ರ ಬರೆದಿದ್ದಾರೆ.
ನಟಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ವಿಚ್ಛೇದನ ಪಡೆದಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದ್ದು, ನಂತರದಲ್ಲಿ ಅನೇಕರು ಅವರನ್ನು ಟ್ರೋಲ್ ಮಾಡಿದರು. ಚಂದನ್ ವಿಚ್ಛೇದನ ಪಡೆಯಲು ನಿವೇದಿತಾ ಕಾರಣ ಎನ್ನುವ ಮಾತುಗಳು ಕೂಡ ವ್ಯಕ್ತವಾಗಿದ್ದು, ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಮಾಡಲಾಗಿದೆ. ಈ ವಿಚಾರದಲ್ಲಿ ನಿವೇದಿತಾ ಗೌಡ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ.
ಪತ್ರದಲ್ಲಿನ ವಿಚಾರಗಳು ಹೀಗಿವೆ; ‘ನಕಾರಾತ್ಮಕತೆ ಹರಡುವ ವ್ಯಕ್ತಿಗಳಿಗೆ ನೀವು ಎಷ್ಟು ಕಡಿಮೆ ಪ್ರತಿಕ್ರಿಯಿಸುತ್ತೀರೋ ನಿಮ್ಮ ಜೀವನ ಅಷ್ಟು ನಮ್ಮೆದಿಯಿಂದ ಇರುತ್ತದೆ ಎಂದು ನಂಬಿದವಳು ನಾನು. ಅದೇ ರೀತಿ ನಿಮ್ಮ ಕಾರ್ಯಗಳು/ಆಲೋಚನೆಗಳು ಜನರ ಮೇಲೆ ಪರಿಣಾಮ ಬೀರುತ್ತವೆ ಎಂದು ನಾನು ನಂಬುತ್ತೇನೆ. ನಾನು ದೀರ್ಘಕಾಲದಿಂದ ಮೌನವಾಗಿದ್ದೇನೆ ಎಂದ ಮಾತ್ರಕ್ಕೆ ನಾನು ನಿಮ್ಮ ಟ್ರೋಲ್ಗಳನ್ನು ಹಾಗೂ ಆಧಾರ ರಹಿತ ಅಭಿಪ್ರಾಯ ಒಪ್ಪುತ್ತೇನೆ ಎಂದಲ್ಲ’ ಎಂದು ಪತ್ರದಲ್ಲಿ ನಿವೇದಿತಾ ಗೌಡ ಬರೆದುಕೊಂಡಿದ್ದಾರೆ.
‘ನನ್ನ ಜೀವನ ಮತ್ತು ನನ್ನ ಪ್ರಯಾಣದ ಬಗ್ಗೆ ತಿಳಿಯದೆ ಅನೇಕರು ನನ್ನನ್ನು ಬೇರೆಯವರಿಗೆ ಹೋಲಿಕೆ ಮಾಡುತ್ತಿದ್ದಾರೆ. ಅನೇಕ ಟ್ರೋಲ್ ಪೇಜ್ಗಳು ನನಗೆ ಬೇರೆ ಬೇರೆ ಹೆಸರನ್ನು ನೀಡುತ್ತಿದ್ದಾರೆ. ಏನೆಲ್ಲ ಮಾರುತ್ತಾರೋ ಅದೆಲ್ಲವನ್ನೂ ಜನರು ಖರೀದಿ ಮಾಡುತ್ತಾರೆ ಎಂಬುದು ಬೇಸರದ ವಿಚಾರ. ಈ ರೀತಿಯ ಊಹೆಗಳು, ತೀರ್ಪುಗಳು ಮತ್ತು ವಿವರಣೆಗಳು ಒಬ್ಬರ ಜೀವನ, ಕುಟುಂಬದ ಮೇಲೆ ಪರಿಣಾಮ ಬೀರುತ್ತವೆ’ ಎಂದು ನಿವೇದಿತಾ ಬೇಸರ ಹೊರಹಾಕಿದ್ದಾರೆ.
‘ನೀವು ನನ್ನ ಶೋನ ಒಂದೂವರೆ ಗಂಟೆಗಳ ನೋಡುತ್ತೀರಿ ಎಂದ ಮಾತ್ರಕ್ಕೆ ನನ್ನ ಬಗ್ಗೆ, ನನ್ನ ಕುಟುಂಬದ ಬಗ್ಗೆ ನೀವು ಬೇಕಾದಂತೆ ಮಾತನಾಡಬಹುದು ಎಂದರ್ಥವಲ್ಲ. ಇದರ ಬದಲು ಒಳ್ಳೆಯದನ್ನು ಮಾರಾಟ ಮಾಡಿ. ನಿಮ್ಮ ವಿಷಯಕ್ಕಾಗಿ ನಮ್ಮ ಹೆಸರುಗಳನ್ನು ಬಳಸುವುದನ್ನು ನಿಲ್ಲಿಸಿ. ಜೀವನ ದೊಡ್ಡದಾಗಿದೆ ಮತ್ತು ಉತ್ತಮವಾಗಿದೆ. ಹೀಗಾಗಿ ಅಭಿಪ್ರಾಯಗಳನ್ನು ರಚಿಸುವುದಕ್ಕಿಂತ ಮತ್ತು ಜನರಿಗೆ ಕೆಟ್ಟದ್ದನ್ನು ನೀಡುವುದಕ್ಕಿಂತ ದೊಡ್ಡ ವ್ಯಕ್ತಿಯಾಗಿರಿ. ಒಬ್ಬರನ್ನೊಬ್ಬರು ಹಾಳು ಮಾಡುವುದಕ್ಕಿಂತ ಒಟ್ಟಾಗಿ ಬೆಳೆಯೋಣ. ಈ ಪ್ರಕ್ರಿಯೆಯಲ್ಲಿ ನೋವಾದವರ ಪರವಾಗಿ ನಿಲ್ಲೋಣ’ ಎಂದು ಅವರು ಬರೆದುಕೊಂಡಿದ್ದಾರೆ ಎಂದು ವರದಿಯಾಗಿದೆ.