ಮಹಾಮಾರಿ ಕರೊನಾ ವೈರಸ್ ತಡೆಗಟ್ಟಲು ಹೇರಲಾಗಿರುವ ಲಾಕ್ಡೌನ್ನಿಂದ ಪಾತಾಳಕ್ಕೆ ಕುಸಿದಿರುವ ಆರ್ಥಿಕತೆಗೆ ಉತ್ತೇಜನ ತುಂಬಲು ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, ನಿನ್ನೆ ಹಾಗೂ ಮೊನ್ನೆ ಕೆಲವು ಕ್ಷೇತ್ರಗಳಿಗೆ ಇದರ ಪ್ರಯೋಜನ ವಿವರಿಸಿದ್ದ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್, ಇಂದು ಇತರೆ ಕ್ಷೇತ್ರಗಳಿಗೆ ಏನು ಸಿಗಲಿದೆ ಎಂಬುದನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಕರ್ನಾಟಕದ ರಾಗಿಗೆ ಜಾಗತಿಕ ಬ್ರ್ಯಾಂಡಿಂಗ್ ವ್ಯವಸ್ಥೆ
ಕೃಷಿ ಮೂಲ ಸೌಕರ್ಯಕ್ಕೆ 1 ಲಕ್ಷ ಕೋಟಿ ರೂಪಾಯಿ ನೀಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಕೃಷಿ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಇದು ಮೂರನೇ ಘೋಷಣೆಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದ್ರಿಂದ ಕೃಷಿಕರ ಆದಾಯದಲ್ಲೂ ಏರಿಕೆ ಕಂಡು ಬರಲಿದೆ ಎಂದಿದ್ದಾರೆ. ಎಲ್ಲ ದೇಶಿಯ ಆಹಾರ ಉತ್ಪನ್ನಗಳ ಮಾರಾಟಕ್ಕೆ ಒತ್ತು ನೀಡಲಾಗಿದೆ. ಕರ್ನಾಟಕದ ರಾಗಿ, ತಮಿಳುನಾಡಿನ ಅರಿಶಿನ ಹಾಗೂ ಕಾಶ್ಮೀರದ ಕೇಸರಿ ಸೇರಿದಂತೆ ಆಯಾ ಕ್ಷೇತ್ರಗಳ ಪ್ರಸಿದ್ಧ ದೇಶಿ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೆ ಸರ್ಕಾರ ಒತ್ತು ನೀಡಲಿದೆ.
ಮೀನುಗಾರರಿಗೆ ಬಂಪರ್ ಸುದ್ದಿ
ಮೀನುಗಾರಿಕೆಗೂ ಸರ್ಕಾರ ನೆರವಿನ ಹಸ್ತ ನೀಡಿದೆ. ಮೀನುಗಾರರಿಗೆ ಹೊಸ ಬೋಟ್, ಉಪಕರಣ ಖರೀದಿಗೆ ಹಣದ ಸಹಾಯ ಮಾಡಲಿದೆ. ಮತ್ಸ್ಯ ಸಂಪದ ಯೋಜನೆಗೆ 20 ಸಾವಿರ ಕೋಟಿ ರೂಪಾಯಿಯನ್ನು ಸರ್ಕಾರ ಮೀಸಲಿಟ್ಟಿದೆ. ಮೀನುಗಾರಿಕೆ ಉದ್ಯಮದಲ್ಲಿ 55 ಲಕ್ಷ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ.
ಜಾನುವಾರುಗಳ ರಕ್ಷಣೆ:
ಜಾನುವಾರುಗಳ ರಕ್ಷಣೆಗೆ ಮುಂದಾದ ಕೇಂದ್ರ ಸರ್ಕಾರ ರೋಗ ತಡೆಗೆ ಮುಂದಾಗಿದೆ. ಇದ್ರಡಿ ಪಶುಗಳಿಗೆ ರೋಗ ನಿರೋಧಕ ಲಸಿಕೆ ನೀಡಲು ಮುಂದಾಗಿದೆ.ಡೈರಿ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಲು 15 ಸಾವಿರ ಕೋಟಿ ರೂ. ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದ್ರಿಂದ ಡೈರಿ ಉತ್ಪನ್ನಗಳ ರಫ್ತಿಗೂ ಸಹಾಯವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಗುಣಮಟ್ಟದ ಮಿಲ್ಕ್ ಪೌಡರ್, ಚೀಸ್ ಉತ್ಪನ್ನಗಳಿಗೆ ಒತ್ತ ನೀಡಲಾಗಿದೆ.
ಔಷಧಿ ಸಸ್ಯಗಳ ಕೃಷಿ
ಔಷಧಿ ಸಸ್ಯಗಳ ಕೃಷಿಗೆ 4 ಸಾವಿರ ಕೋಟಿ ರೂಪಾಯಿಯನ್ನು ಸರ್ಕಾರ ನೀಡ್ತಿದೆ. 10 ಲಕ್ಷ ಹೆಕ್ಟೇರ್ ನಲ್ಲಿ ಬೆಳೆ ಬೆಳೆಯಲಾಗುವುದು. ಗಂಗಾ ನದಿ ಆಸುಪಾಸು ಔಷಧಿ ಸಸ್ಯಗಳ ಕೃಷಿಗೆ ಉತ್ತೇಜನ ನೀಡಲಾಗುವುದು.
ಗ್ರಾಮೀಣ ಮಹಿಳೆಯರಿಗೆ ಸಿಹಿ ಸುದ್ದಿ
ಜೇನು ಸಾಕಣೆಗಾಗಿ 500 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. ಇದ್ರಿಂದ ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಸಿಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 2 ಲಕ್ಷ ಜೇನು ಕೃಷಿಕರಿಗೆ ಸರ್ಕಾರದ ಈ ಹಣದಿಂದ ಸಹಾಯವಾಗಲಿದೆ ಎಂದ ನಿರ್ಮಲಾ ಸೀತಾರಾಮನ್ ಜೇನು ನೊಣದಿಂದ ಉತ್ಪಾದನೆಯಾಗುವ ಮೇಣದ ರಫ್ತಿಗೆ ಕಡಿವಾಣ ಹಾಕಲಾಗುವುದು ಎಂದಿದ್ದಾರೆ.
ಅಗತ್ಯ ಉತ್ಪನ್ನಗಳ ಕಾಯ್ದೆಯಲ್ಲಿ ತಿದ್ದುಪಡಿ
ಕೇಂದ್ರ ಸರ್ಕಾರ ಅಗತ್ಯ ಉತ್ಪನ್ನಗಳ ಕಾಯ್ದೆಯಲ್ಲಿ ತಿದ್ದುಪಡಿ ಮಾಡುವ ಘೋಷಣೆ ಮಾಡಿದೆ. ಇದ್ರಿಂದ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕೃಷಿ ಮಾರುಕಟ್ಟೆಯಲ್ಲಿ ಸುಧಾರಣೆ ತರಲು ಕೇಂದ್ರ ಮುಂದಾಗಿದೆ. ರೈತರಿಗೆ ಇಷ್ಟವಾದ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು. ಎಪಿಎಂಸಿಯಲ್ಲೇ ಮಾರಾಟ ಮಾಡುವುದು ಕಡ್ಡಾಯವಲ್ಲವೆಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇ-ಟ್ರೇಡಿಂಗ್ ಮೂಲಕ ಉತ್ಪನ್ನ ಮಾರಾಟಕ್ಕೆ ರೈತರಿಗೆ ಅವಕಾಶ ನೀಡಲಾಗ್ತಿದೆ. ಕೃಷಿ ಉತ್ಪನ್ನಗಳ ಅಂತರಾಜ್ಯ ಮುಕ್ತ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಸಗಟು ಬೆಲೆಗೆ ಮಾರಾಟ ಮಾಡಲು ರೈತರಿಗೆ ಕೇಂದ್ರ ಸರ್ಕಾರ ನೆರವು ನೀಡ್ತಿದೆ.
ಅತಿ ಹೆಚ್ಚು ಬೆಲೆ ನೀಡುವವರಿಗೆ ಕೃಷಿ ಉತ್ಪನ್ನಗಳ ಮಾರಾಟ:
ಕೃಷಿ ಮಾರುಕಟ್ಟೆಯಲ್ಲಿ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಮಿತಿ ಇರುವುದಿಲ್ಲ. ಎಪಿಎಂಸಿಯಲ್ಲಿ ಮಾರಾಟ ಮಾಡಬೇಕೆಂಬ ನಿಯಮವಿಲ್ಲ. ರೈತರಿಗೆ ತಮಗೆ ಇಷ್ಟವಾದ ಮಾರುಕಟ್ಟೆಯಲ್ಲಿ ಉತ್ಪನ್ನ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.