ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಚಿತ್ರನಟ ಜಗ್ಗೇಶ್ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.
ಇಬ್ಬರು ನಾಯಕರು ಇಂದೇ ನಾಮಪತ್ರ ಸಲ್ಲಿಸಬೇಕಿತ್ತು. ಆದರೆ ಹಣಕಾಸು ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಅವರು ದೆಹಲಿಯಿಂದ ಆಗಮಿಸುವುದು ತಡವಾಗುವುದರಿಂದ ನಾಳೆ ನಾಮಪತ್ರವನ್ನು ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.
ನಾಮಪತ್ರ ಸಲ್ಲಿಕೆಗೆ ನಾಳೆ ಕಡೆಯ ದಿನವಾಗಿದ್ದು, ಬಿಜೆಪಿ ಅಭ್ಯರ್ಥಿಗಳಾಗಿ ಆಯ್ಕೆಯಾಗುವ ನಿರ್ಮಲಾ ಸೀತಾರಾಮನ್ ಮತ್ತು ಜಗ್ಗೇಶ್ ಮಂಗಳವಾರದಂದು ಉಮೇದುವಾರಿಕೆ ಮಾಡಲಿದ್ದಾರೆ. ವಿಧಾನಸಭೆಯಲ್ಲಿ ಬಿಜೆಪಿ ಹೊಂದಿರುವ ಬಲಾಬಲದ ಆಧಾರದ ಮೇಲೆ ಇಬ್ಬರು ಅಭ್ಯರ್ಥಿಗಳನ್ನು ಸುಲಭವಾಗಿ ಆಯ್ಕೆ ಮಾಡಲು ಯಾವುದೇ ಅಡ್ಡಿ ಆತಂಕಗಳಿಲ್ಲ. ಆದರೆ ಹೆಚ್ಚುವರಿ ಮತಗಳನ್ನು ಯಾರಿಗೆ ಚಲಾಯಿಸಬೇಕು ಎಂಬುದು ಗೊಂದಲಕ್ಕೀಡಾಗಿದೆ.
ಜೆಡಿಎಸ್ನಿಂದ ಕುಪೇಂದ್ರ ರೆಡ್ಡಿ ಕಣಕ್ಕಿಳಿದರೆ ಹೆಚ್ಚುವರಿ ಮತಗಳನ್ನು ಅವರಿಗೆ ಹಾಕಬೇಕೆ ಇಲ್ಲವೇ ಬೇಡವೇ ಎಂಬ ಗೊಂದಲ ಪಕ್ಷದಲ್ಲಿ ಮುಂದುವರೆದಿದೆ. ಒಂದು ವೇಳೆ ಜೆಡಿಎಸ್ ಅಭ್ಯರ್ಥಿಗೆ ಹೆಚ್ಚುವರಿ ಮತಗಳನ್ನು ಚಲಾಯಿಸಿದರೆ ಕಾಂಗ್ರೆಸ್ ನಾಳೆ ಇದೇ ಅಸ್ತ್ರವನ್ನು ಮುಂದಿಟ್ಟುಕೊಂಡು ಜೆಡಿಎಸ್ ಬಿಜೆಪಿಯ ಬಿ ಟೀಮ್ ಎಂದು ಅಪಪ್ರಚಾರ ನಡೆಸಬಹುದೆಂಬ ಆತಂಕವಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ನ್ನು ಬಿಜೆಪಿಯ ಬಿ ಟೀಂ ಎಂದು ಕಾಂಗ್ರೆಸ್ನ ಅನೇಕ ನಾಯಕರು ಟೀಕೆ ಮಾಡಿದ್ದರು. ಈಗ ಕುಪೇಂದ್ರ ರೆಡ್ಡಿಗೆ ಬೆಂಬಲ ಕೊಡಬೇಕೆ ಇಲ್ಲವೇ ತಟಸ್ಥವಾಗಿ ಉಳಿಯಬೇಕೆ? ಎಂಬ ಗೊಂದಲದಲ್ಲಿ ಶಾಸಕರಿದ್ದಾರೆ. ಮೂಲಗಳ ಪ್ರಕಾರ ಕಾಂಗ್ರೆಸ್ ನಾಲ್ಕನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಬಿಜೆಪಿ ವಿಯಿಲ್ಲದೆ ಜೆಡಿಎಸ್ನ ಕುಪೇಂದ್ರ ರೆಡ್ಡಿಯನ್ನು ಬೆಂಬಲಿಸುವ ಸಾಧ್ಯತೆ ಹೆಚ್ಚಾಗಿದೆ.