ಬೆಂಗಳೂರು: ಮುಂಗಾರು ಮಳೆ ಸಿನಿಮಾ ಖ್ಯಾತಿಯ ನೀನಾಸಂ ಅಶ್ವತ್ಥ ಅವರನ್ನು ಬಂಧಿಸಲಾಗಿದೆ. ಚೆಕ್ ಬೌನ್ಸ್ ವಿಚಾರದಲ್ಲಿ ಅವರು ಬಂಧನಕ್ಕೆ ಒಳಗಾಗಿದ್ದಾರೆ. ಈ ಹಿಂದೆ ಕೂಡ ಅವಾಚ್ಯ ಶಬ್ದಗಳಿಂದ ನಿಂದನೆ, ಮಾನನಷ್ಟ, ಕೊಲೆ ಬೆದರಿಕೆ ಸೇರಿದಂತೆ ವಿವಿಧ ಪ್ರಕರಣಗಳು ಈ ನಟನ ವಿರುದ್ಧ ದಾಖಲಾಗಿದ್ದವು. ಇದೀಗ ಚೆಕ್ ಬೌನ್ಸ್ ಪ್ರಕರಣದಲ್ಲಿ ಅವರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಲಾಗಿದೆ.
ಹಾಸನ ಮೂಲದ ರೋಹಿತ್ ಎಂಬುವರಿಂದ ನಟ ನೀನಾಸಂ ಅಶ್ವತ್ಥ ಹಸುಗಳನ್ನು ಖರೀದಿ ಮಾಡಿದ್ದರು. ಈ ವೇಳೆ 1.5 ಲಕ್ಷ ರೂ ಮೊತ್ತದ ಚೆಕ್ ನೀಡಿದ್ದರು. ಬ್ಯಾಂಕ್ಗೆ ಚೆಕ್ ಹಾಕಿದಾಗ ಬೌನ್ಸ್ ಆಗಿತ್ತು. ಈ ಸಂಬಂಧ ಹಾಸನದ ಜೆಎಮ್ಎಫ್ಸಿ ಕೋರ್ಟ್ನಲ್ಲಿ ರೋಹಿತ್ ಕೇಸ್ ದಾಖಲಿಸಿದ್ದರು.
ಆದರೆ ನಾಲ್ಕೂ ಬಾರಿಯೂ ಕೋರ್ಟ್ಗೆ ನಟ ನೀನಾಸಂ ಅಶ್ವತ್ಥ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಐದನೇ ಬಾರಿ ಅರೆಸ್ಟ್ ವಾರಂಟ್ ಹೊರಡಿಸಿದ್ದರು ಕೂಡ ಅವರು ತಲೆ ಮರೆಸಿಕೊಂಡಿದ್ದರು ಎನ್ನಲಾಗಿದೆ. ಈ ನಡುವೆ ಹಾಸನ ಬಡಾವಣೆ ಠಾಣೆ ಪೊಲೀಸರು ಜುಲೈ 8ರಂದು ರಾತ್ರಿ ನಟನನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.ಬಳಿಕ ನಟ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಕೊಂಡು ಬಿಡುಗಡೆ ಮಾಡಲಾಗಿದ್ದು, ಬಾಕಿ ಹಣವನ್ನು ಶೀಘ್ರದಲ್ಲಿ ನೀಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.