ಮಂಗಳೂರು: ನಗರದಲ್ಲಿ ಕಾಣಿಸಿಕೊಂಡಿದ್ದ ಉಗ್ರ ಸಂಘಟನೆಗಳ ಪರ ಗೋಡೆ ಬರಹಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ತನಿಖೆ ಆರಂಭವಾಗಿದ್ದು, ಇನ್ನೆರೆಡು ದಿನಗಳಲ್ಲಿ ತನಿಖಾಧಿಕಾರಿಗಳ ತಂಡ ನಗರಕ್ಕೆ ಭೇಟಿ ನೀಡಲಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಮುನೀರ್ (22) ಮತ್ತು ಮೊಹಮದ್ ಶಾರೀಖ್ (21) ಅವರಿಂದ ಪೊಲೀಸರು ಸಾಕಷ್ಟು ಮಾಹಿತಿ ಕಲೆಹಾಕಿದ್ದಾರೆ. ಇವರಿಗೆ ಉಗ್ರಗಾಮಿಗಳ ನಂಟು ಇರುವ ಬಗ್ಗೆ ಎನ್ಐಎ ತನಿಖೆ ನಡೆಸಲಿದೆ.
ನಗರದ ಖಾಸಗಿ ಕಾಲೇಜಿನಲ್ಲಿ ಎಂಟೆಕ್ ಮಾಡುತ್ತಿದ್ದ ಮುನೀರ್, ಲಾಕ್ಡೌನ್ ಆಗಿ ಕಾಲೇಜು ತರಗತಿಗಳು ಸ್ಥಗಿತಗೊಂಡಿದ್ದಾಗ ಮನೆಯಿಂದ ಹೊರಗೆ ಹೋಗಲೂ ಅವಕಾಶ ಇರಲಿಲ್ಲ. ಫುಡ್ ಡೆಲಿವರಿಗೆ ಅವಕಾಶವಿದೆ ಎಂಬ ಕಾರಣಕ್ಕೆ ಜೊಮೆಟೊದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ.
ಬಲ್ಮಠದ ಆರ್ಯಸಮಾಜ ರಸ್ತೆಯ ಅಪಾರ್ಟ್ಮೆಂಟ್ ಒಂದರಲ್ಲಿ ತಂದೆ ಮತ್ತು ತಮ್ಮನೊಂದಿಗೆ ವಾಸವಿದ್ದ. ಈತನನ್ನು ಭೇಟಿಯಾಗಲು ಮೊಹಮದ್ ಶಾರೀಖ್ ಆಗಾಗ ಬರುತ್ತಿದ್ದ ಎನ್ನಲಾಗಿದೆ.
ಗೋಡೆ ಬರಹ ಬರೆದ ನಂತರವೂ ಆರೋಪಿಗಳು ಇದೇ ಮನೆಗೆ ಹಿಂದಿರುಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.