ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಜೂನ್ 27 ರಂದು ಬೆಳ್ತಂಗಡಿಯಲ್ಲಿ ಬೆಂಗಳೂರು ವಿಭಾಗದ ಎನ್.ಐ.ಎ ಅಧಿಕಾರಿಗಳು ದಾಳಿ ಮಾಡಿದ್ದರು. ಈ ದಾಳಿ ಸಂಬಂಧ ಎನ್.ಐ.ಎ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಬೆಳ್ತಂಗಡಿ ಎನ್.ಐ.ಎ ದಾಳಿ ಪ್ರಕರಣ: ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ನಿವಾಸಿ ವೃತ್ತಿಯಲ್ಲಿ ಕಾರು ಚಾಲಕ ನೌಷದ್(30) ಎಂಬಾತನ ಮನೆ ಮೇಲೆ ಎನ್.ಐ.ಎ ಅಧಿಕಾರಿಗಳು ಜೂನ್ 27 ರಂದು ಬೆಳಗ್ಗೆ ದಾಳಿ ಮಾಡಿದ್ದು. ದಾಳಿ ವೇಳೆ ನೌಷದ್ ಮನೆಯಲ್ಲಿರಲ್ಲಿಲ್ಲ. ಎನ್.ಐ.ಎ ಅಧಿಕಾರಿಗಳು ನೌಷದ್ ಮನೆಯವರ ಕೈಗೆ ನೌಷದ್ ಖುದ್ದು ಬೆಂಗಳೂರು ಎನ್ಐಎ ಕಚೇರಿಗೆ ಬಂದು ತನಿಖೆಗೆ ಹಾಜರಾಗಲು ನೋಟಿಸ್ ನೀಡಿ ಹೋಗಿದ್ದರು. ನೌಷದ್ ಮನೆಮಂದಿ ಬಡಕುಟುಂಬದವರಾಗಿದ್ದು, ವೃತ್ತಿಯಲ್ಲಿ ಕಾರು ಚಾಲಕನಾಗಿದ್ದಾನೆ. ಕಳೆದ ವರ್ಷ ಮದುವೆ ಕೂಡ ಆಗಿದ್ದ. ಕೆಲ ದಿನಗಳಿಂದ ಪ್ರವೀಣ್ ಹತ್ಯೆ ಸಂಬಂಧ ಮನೆಗೂ ಬಾರದೆ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ದ.ಕ ಮತ್ತು ಕೊಡಗಿನ ಮೂರು ಕಡೆ ದಾಳಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನೌಷದ್ ಮತ್ತು ಕೊಡಗು ಜಿಲ್ಲೆಯ ಅಬ್ದುಲ್ ನಾಸಿರ್, ಅಬ್ದುಲ್ ರೆಹಮಾನ್ ಮನೆ ಮೇಲೆ ಜೂನ್ 27 ರಂದು ಮೂರು ಕಡೆ ಬೆಂಗಳೂರು ವಿಭಾಗದ ಎನ್.ಐ.ಎ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿ ಕೆಲವು ದಾಖಲೆಗಳು ಹಾಗೂ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್.ಐ.ಎ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಹಂತಕರಿಗೆ ಆಶ್ರಯ ನೀಡಿದ ಈ ಆರೋಪಿಗಳು: ಮೂವರೂ ಆರೋಪಿಗಳು ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ವಿವಿಧ ಅಡಗುತಾಣಗಳಲ್ಲಿ ಪ್ರವೀಣ್ ನೆಟ್ಟಾರು ಅವರ ಹತ್ಯೆ ಮಾಡಿದ ಪ್ರಮುಖ ಹಂತಕರಿಗೆ ತಲೆಮರೆಸಿಕೊಳ್ಳಲು ಆಶ್ರಯ ನೀಡಿದ್ದಾರೆ ಎಂದು ಶಂಕಿಸಲಾಗಿದೆ.
2022ರ ಆಗಸ್ಟ್ ನಲ್ಲಿ ಎನ್ಐಎ ಕೈಗೆತ್ತಿಕೊಂಡಿದ್ದ ಈ ಪ್ರಕರಣದಲ್ಲಿ ಮೂವರ ಹೊರತಾಗಿ ಇನ್ನೂ ಐವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.