ಪುತ್ತೂರು:ಸಿಡಿಲು ಬಡಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆಂದು ವದಂತಿ ಹಬ್ಬಿದ ಹಿನ್ನೆಲೆ ಸ್ಥಳಕ್ಕೆ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ಪರಿಶೀಲನೆ ನಡೆಸಿದ ಘಟನೆ ಒಳಮೊಗ್ರು ಗ್ರಾಮದ ದರ್ಬೆತ್ತಡ್ಕದಲ್ಲಿ ನಡೆದಿದೆ. ದರ್ಬೆತ್ತಡ್ಕ ನಿವಾಸಿ ಪಿ. ಬಾಬು (55) ಮೃತ ದುರ್ದೈವಿ.
ಬಾಬು ಅವರು ತಮ್ಮ ಮನೆ ಪರಿಸರದಲ್ಲಿ ನಿನ್ನೆ ಸಂಜೆ ವೇಳೆ ಮನೆ ಅಂಗಳದಲ್ಲಿ ಕೆಲಸ ಮಾಡುತ್ತಿದ್ದಾಗ ಗುಡುಗಿನ ಶಬ್ದ ಕೇಳಿ ಮನೆ ಒಳಗೆ ಓಡಿ ಬಂದು ಸಾವನ್ನಪ್ಪಿದ್ದರು. ಸಂಜೆ 7 ಗಂಟೆ ಹೊತ್ತಿಗೆ ಬಾಬು ಅವರು ಸಿಡಿಲಿನ ಆಘಾತದಿಂದ ಮೃತಪಟ್ಟಿದ್ದಾರೆ ಎಂಬ ವದಂತಿ ಹರಡಿ ಅದು ತಾಲೂಕು ಕಚೇರಿಗೆ ತಲುಪಿತ್ತು. ವಿಷಯ ತಿಳಿದ ತಹಶಿಲ್ದಾರ್ ಕುಂಞಿ ಅಹ್ಮದ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಪರಿಸರದಲ್ಲಿ ಸಿಡಿಲು ಬಿದ್ದಿರುವ ಅಥವಾ ಆಘಾತದ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ. ಮೃತರ ದೇಹದ ಮೇಲೂ ಗಾಯಗಳು ಇರಲಿಲ್ಲ. ಹೀಗಾಗಿ ಸಿಡಿಲಾಘಾತದ ಸಾವು ಅನ್ನುವ ಬಗ್ಗೆ ಅನುಮಾನ ಮೂಡಿತ್ತು. ಬಳಿಕ ಪೂರಕ ಸಾಕ್ಷಿಗಳು ಇಲ್ಲದ ಕಾರಣ ಮರಣೋತ್ತರ ಪರೀಕ್ಷೆಗೆ ತೀರ್ಮಾನಿಸಲಾಯಿತು. ತಾಲೂಕು ಆಸ್ಪತ್ರೆಯ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮನೆ, ಬಾಬು ಅರು ಸಂಜೆ 4.30ರ ವೇಳೆಗೆ ಅಂಗಳದಲ್ಲಿ ಕಟ್ಟಿಗೆ ತುಂಡರಿಸುತ್ತಿದ್ದರು. ಆಗ ಗುಡುಗಿನ ಸದ್ದು ಕೇಳಿಸಿದ್ದು, ಅವರು ಓಡಿ ಬಂದು ಮನೆಯೊಳಗೆ ಮೃತಪಟ್ಟಿದ್ದಾರೆ ಎಂದಿದ್ದಾರೆ. ಆದರೆ ಮರಣೋತ್ತರ ವರದಿ ಬಂದ ಬಳಿಕ ನಿಜಾಂಶ ಗೊತ್ತಾಗಲಿದೆ.