ಮಂಗಳೂರು: ಪಟ್ಲ ಸತೀಶ್ ಶೆಟ್ಟಿ ಅವರಿಂದ ಯಕ್ಷಗಾನ ಪ್ರಿಯರಿಗೆ ಸಂತಸದ ಸುದ್ದಿಯೊಂದು ಹೊರ ಬಿದ್ದಿದೆ. ಕಟೀಲು ಯಕ್ಷಗಾನ ಮೇಳದಲ್ಲಿದ್ದ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ ಶೀಘ್ರದಲ್ಲೇ ಹೊಸ ಮೇಳ ಆರಂಭಗೊಳ್ಳಲಿದ್ದು, ಸಿದ್ಧತೆಗಳು ನಡೆಯುತ್ತಿವೆ.
ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ ಹೊಸ ಮೇಳವೊಂದು ಆರಂಭಗೊಳ್ಳಲಿದೆ ಎಂಬ ಸುದ್ದಿ ಬಹು ದಿನಗಳಿಂದ ಹರಿದಾಡುತ್ತಿತ್ತು. ಇದೀಗ ಇದಕ್ಕೆ ಪುಷ್ಟಿ ನೀಡುವಂತೆ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿನಲ್ಲಿ ಮೇಳ ಆರಂಭವಾಗಲಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಸತೀಶ್ ಶೆಟ್ಟಿ, ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಮೇಳದ ಭಾಗವತಿಕೆಗೆ ಸಂಬಂಧಪಟ್ಟಂತೆ ಕ್ಷೇತ್ರದ ಕಮಿಟಿ ಜೊತೆ ಮಾತುಕತೆ ನಡೆದಿದೆ. ಆ ಮೇಳದಲ್ಲಿ ನಾನು ಕಲಾವಿದ ಇರಬಹುದಷ್ಟೇ; ಆ ಮೂಲಕ ನಾನು ಸುಬ್ರಹ್ಮಣ್ಯ ದೇವರ ಸೇವೆ ಮಾಡುತ್ತೇನೆ’ ಎಂದು ಎಂದಿದ್ದಾರೆ.
ಇನ್ನು ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿನಲ್ಲಿ ಮೇಳ ಆರಂಭದ ಕುರಿತು ಕಳೆದ ಮೂರು ವರ್ಷಗಳ ಹಿಂದೆಯೇ ಚಿಂತನೆ ಇತ್ತು. ಸದ್ಯ ಪ್ರಥಮ ಹಂತದಲ್ಲಿದೆ. ಪಟ್ಲ ಸತೀಶ್ ಶೆಟ್ಟಿ ಹೆಸರು ಕೇಳಿಬಂದ ಕಾರಣ ಈ ವಿಚಾರ ಮುನ್ನೆಲೆಗೆ ಬಂದಿದೆ. ಪಟ್ಲ ಸತೀಶ್ ಶೆಟ್ಟಿ ಅವರನ್ನು ಭಾಗವತರಾಗಿ ಆಯ್ಕೆ ಮಾಡುವ ಕುರಿತು ಚರ್ಚೆ ನಡೆಯುತ್ತಿದ್ದು, ಕಮಿಟಿ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್ ತಿಳಿಸಿದ್ದಾರೆ.