ನೇಪಾಳ–ಟಿಬೆಟ್ ಗಡಿ ಪ್ರದೇಶದಲ್ಲಿ ಹಿಮನದಿ ಕುಸಿತದಿಂದ ಉಂಟಾದ ಹಿಮಪಾತ ಮತ್ತು ಭೀಕರ ಪ್ರವಾಹ-ಭೂಕುಸಿತಕ್ಕೆ ಬಲಿಯಾದವರ ಸಂಖ್ಯೆ 469ಕ್ಕೆ ಏರಿಕೆಯಾಗಿದೆ. ಗಡಿಯ ಎರಡೂ ಭಾಗಗಳಲ್ಲಿ ಒಟ್ಟು 1,498 ಮಂದಿ ನಾಪತ್ತೆಯಾಗಿದ್ದು, ಸುಮಾರು 290 ಭಾರತೀಯರೊಂದಿಗಿನ ಸಂಪರ್ಕ ಇನ್ನೂ ಸಾಧಿಸಲು ಸಾಧ್ಯವಾಗಿಲ್ಲ.
ಹಿಮನದಿ ಕುಸಿದ ಪರಿಣಾಮ ಮಧ್ಯ ನೇಪಾಳದಾದ್ಯಂತ ಭಾರಿ ಪ್ರಮಾಣದ ಪ್ರವಾಹ ಸೃಷ್ಟಿಯಾಗಿದ್ದು, ಮನೆಗಳು, ವಾಹನಗಳು, ರಸ್ತೆಗಳು ಹಾಗೂ ಸೇತುವೆಗಳು ನೀರುಪಾಲಾಗಿವೆ. ಕೇವಲ ಕೆಲವೇ ಗಂಟೆಗಳಲ್ಲಿ ಸುಮಾರು 200 ಕಿ.ಮೀ. ವ್ಯಾಪ್ತಿಯಲ್ಲಿ ಭಾರಿ ಹಾನಿ ಸಂಭವಿಸಿದ್ದು, ಭೋಟೆ ಕೋಶಿ–ತ್ರಿಶೂಲಿ ಕಾರಿಡಾರ್ನಲ್ಲಿ ನೂರಾರು ಜನರು ಕೊಚ್ಚಿಹೋಗಿದ್ದಾರೆ ಅಥವಾ ದುರ್ಗಮ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ.
ಅನೇಕ ಗ್ರಾಮಗಳು ಸಂಪರ್ಕ ಕಡಿತಗೊಂಡಿದ್ದು, ಕೃಷಿ ಭೂಮಿ, ಮಾರುಕಟ್ಟೆ ಮತ್ತು ಸರ್ಕಾರಿ ಕಟ್ಟಡಗಳು ಮಣ್ಣಿನಡಿಯಲ್ಲಿ ಹೂತುಹೋಗಿವೆ. ರಸ್ತೆ ಹಾಗೂ ಸೇತುವೆಗಳು ಧ್ವಂಸಗೊಂಡಿರುವುದು ರಕ್ಷಣಾ ಕಾರ್ಯಾಚರಣೆಗೆ ದೊಡ್ಡ ಸವಾಲಾಗಿದೆ.
ಪ್ರಸ್ತುತ ಅತ್ಯಂತ ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಪಡೆಗಳು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ ವ್ಯಕ್ತವಾಗಿದೆ. ನೇಪಾಳ ಪೊಲೀಸರ ಮಾಹಿತಿಯಂತೆ, 50 ವಿದೇಶಿಯರು ಸೇರಿದಂತೆ ಒಟ್ಟು 796 ಮಂದಿಯನ್ನು ಹೆಲಿಕಾಪ್ಟರ್ಗಳ ಮೂಲಕ ಸುರಕ್ಷಿತವಾಗಿ ರಕ್ಷಿಸಲಾಗಿದೆ.


