ನೆಲ್ಯಾಡಿ: ಮನೆಯ ಅಂಗಳದ ಶೆಡ್ನಲ್ಲಿ ನಿಲ್ಲಿಸಿದ್ದ ಸ್ಕೂಟಿ ಕಳ್ಳತನ ಮಾಡಿರುವ ಘಟನೆನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಹೊಸಮಜಲು-ಬರಮೇಲು ಎಂಬಲ್ಲಿ ನಡೆದಿದೆ.
ಹೊಸಮಜಲು ಬರಮೇಲು ನಿವಾಸಿ ವಿಷ್ಣುರಾಮ ಹೆಗಡೆ ಎಂಬುವವರು ತಮ್ಮ ಸ್ಕೂಟಿಯನ್ನು ಮೇ 2ರಂದು ಮನೆಯ ಶೆಡ್ನಲ್ಲಿ ನಿಲ್ಲಿಸಿ ಸಂಬಂಧಿಕರ ಮನೆಗೆ ತೆರಳಿದ್ದರು. ಅಂದು ರಾತ್ರಿ 11 ಗಂಟೆಯ ಸುಮಾರಿಗೆ ಅವರು ಮನೆಗೆ ವಾಪಸ್ಸಾದಾಗ ಸ್ಕೂಟಿ ಶೆಡ್ನಲ್ಲಿಯೇ ಇತ್ತು. ಆದರೆ, ಮರುದಿನ (ಮೇ 3) ಮುಂಜಾನೆ 8 ಗಂಟೆಗೆ ನೋಡಿದಾಗ ಸ್ಕೂಟಿ ಕಾಣೆಯಾಗಿರುವುದು ಗೊತ್ತಾಗಿದೆ. ತಕ್ಷಣವೇ ಇವರು ನೆರೆಹೊರೆಯವರಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕಳುವಾದ ಸ್ಕೂಟಿಯ ಮೌಲ್ಯ ಸುಮಾರು 40 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ವಿಷ್ಣುರಾಮ ಅವರ ಪಕ್ಕದ ಮನೆಯ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದಾಗ, ಮುಸುಕುಧಾರಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿರುವ ದೃಶ್ಯ ಕಂಡುಬಂದಿದೆ. ಈ ಮುಸುಕುಧಾರಿಯೇ ಸ್ಕೂಟಿ ಕಳವು ಮಾಡಿರುವ ಶಂಕೆ ವ್ಯಕ್ತವಾಗಿದೆ.ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


