ಸುಬ್ರಹ್ಮಣ್ಯ:ಇಲ್ಲಿನ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಗೆ ಶನಿವಾರ ಸಂಜೆ ವೇಳೆ ನಾಲ್ವರು ಶಂಕಿತರು ಭೇಟಿ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತು ನಕ್ಸಲ್ ನಿಗ್ರಹ ದಳದವರು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಶನಿವಾರ ಸಂಜೆ 6.30ರ ಸುಮಾರಿಗೆ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಯೊಂದಕ್ಕೆ ಇಬ್ಬರು ಮಹಿಳೆಯರು, ಇಬ್ಬರು ಪುರುಷರು ಆಗಮಿಸಿದ್ದರು. ಸುಮಾರು 30-45 ನಿಮಿಷ ಅಲ್ಲಿದ್ದು, ಮನೆಯಿಂದ ಊಟ, ಅಕ್ಕಿ, ಸಕ್ಕರೆ ಪಡೆದು ಬಂದ ದಾರಿಯಲ್ಲಿ ಮರಳಿದ್ದರು.
ತನಿಖಾಧಿಕಾರಿಗಳ ಭೇಟಿ; ಶಂಕಿತರು ಭೇಟಿ ನೀಡಿದ ಮಾಹಿತಿ ತಿಳಿಯುತ್ತಲೇ ಸುಬ್ರಹ್ಮಣ್ಯ ಪೊಲೀಸರು ಹಾಗೂ ನಕ್ಸಲ್ ನಿಗ್ರಹ ದಳದ ಸಿಬಂದಿ ಆಗಮಿಸಿ ಆ ಮನೆಯವರಿಂದ ಮತ್ತು ಪರಿಸರದವರಿಂದ ಮಾಹಿತಿ ಕಲೆ ಹಾಕಿದರು. ರವಿವಾರ ಬೆಳಗ್ಗೆ ನಕ್ಸಲ್ ನಿಗ್ರಹ ದಳದ ಡಿವೈಎಸ್ಪಿ ರಾಘವೇಂದ್ರ, ಪುತ್ತೂರು ಉಪವಿಭಾಗ ಡಿವೈಎಸ್ಪಿ ಅರುಣ್ ನಾಗೇಗೌಡ, ಸುಬ್ರಹ್ಮಣ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಕಾರ್ತಿಕ್ ಸೇರಿದಂತೆ ನಕ್ಸಲ್ ನಿಗ್ರಹ ದಳದ ಅಧಿಕಾರಿಗಳು, ಸಿಬಂದಿ, ಗುಪ್ತದಳದ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದರು.