ಮಂಗಳೂರು : ಮೋಸ್ಟ್ ವಾಟೆಂಡ್ ನಕ್ಸಲರು ತಮ್ಮ ಹೋರಾಟ ಅಂತ್ಯಗೊಳಿಸಿ ಕೆಲ ದಿನಗಳಲ್ಲಿ ಸರಕಾರದ ಮುಂದೆ ಬಂದು ತಮ್ಮಲ್ಲಿರುವ ಬಂದೂಕು ನೀಡಿ ಮುಖ್ಯವಾಹಿನಿಗೆ ಬರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಕಳೆದ ವಾರ ಸಿಎಂ ಸಿದ್ದರಾಮಯ್ಯ ಮತ್ತು ಆಂತರಿಕ ಭದ್ರತಾ ಅಧಿಕಾರಿಗಳ ಜೊತೆ ನಕ್ಸಲ್ ಶರಣಾಗತಿ ಸಮಿತಿ ಸಭೆ ನಡೆಸಿ ನಕ್ಸಲರನ್ನು ಶರಣಾಗತಿ ಮಾಡಲು ಒಪ್ಪಿಗೆ ಸೂಚಿಸಿ ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಬಕ್ಕಡಿಬೈಲು ಮುಂಡಾಗಾರು ಲತಾ@ಲೋಕಮ್ಮ@ಶ್ಯಾಮಲಾ,ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿ ನಕ್ಸಲ್ ನಾಯಕಿ ಸುಂದರಿ @ ಗೀತಾ ,ಚಿಕ್ಕಮಗಳೂರು ಜಿಲ್ಲೆಯ ಭದ್ರಸೈಟು,ಬಾಳೆಹೊಳೆಯ ಎಂ.ವನಜಾಕ್ಷಿ ಜ್ಯೋತಿ@ಕಲ್ಪನ ಮೂರು ಜನ ಮೊದಲು ಶರಣಾಗತಿ ಆಗಲಿದ್ದು. ಉಳಿದ ಮೂವರು ನಕ್ಸಲರಾದ ಮಾರೆಪ್ಪ ಅರೋಲಿ, ಕೆ.ವಸಂತ, ಟಿ.ಎನ್.ಜೀಶ್ ಮುಂದಿನ ಪ್ರಕ್ರಿಯೆಯಲ್ಲಿ ಶರಣಾಗತಿ ಆಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ಕೋಟ್ಯಾಂದಡ್ಕ ನಿವಾಸಿ ದಿ.ಬಾಬು ಮತ್ತು ಶ್ರೀಮತಿ ದಂಪತಿಯ ಮೂರನೇ ಮಗಳಾದ ನಕ್ಸಲ್ ನಾಯಕಿ ಭೂಗತವಾಗಿರುವ ಸುಂದರಿ ಮನೆಯವರನ್ನು ಸಂಪರ್ಕಿಸಿದಾಗ ಸಹೋದರ ನಮಗೆ ಶರಣಾಗತಿ ವಿಚಾರದಲ್ಲಿ ಕೆಲವೊಂದು ಕರೆಗಳು ಬಂದಿದೆ. ಶರಣಾಗತಿ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಇಲ್ಲ. ಮುಖ್ಯವಾಹಿನಿಗೆ ಬಂದ್ರೆ ನಮಗೆ ತುಂಬಾ ಸಂತೋಷದ ವಿಚಾರ. 17 ವರ್ಷದಿಂದ ಮನೆ ಬಿಟ್ಟು ಕಾಡಿನಲ್ಲಿದ್ದು ಹೋರಾಟ ಮಾಡುತ್ತಿದ್ದಾರೆ. 2007 ಬಳಿಕ ಸುಂದರಿ ಹೋರಾಟ ಮಾಡಲು ಕಾಡಿಗೆ ಹೋದ ಬಳಿಕ ನೋಡಿಲ್ಲ. ಮನೆಗೆ ಭೇಟಿ ಕೊಟ್ಟಿಲ್ಲ. ಈಗ ನಕ್ಸಲರ ಸಂಖ್ಯೆ ಕಡಿಮೆಯಾಗಿದ್ದು ಹೋರಾಟ ಮಾಡಲು ಆಗಲ್ಲ. ಇನ್ನಾದರೂ ಎಲ್ಲಾ ಹೋರಾಟಗಾರರು ಮುಖ್ಯವಾಹಿನಿಗೆ ಬಂದು ಬದುಕಲಿ. ಸುಂದರಿಯನ್ನು ನಾವು ಮನೆಗೆ ಸೇರಿಸಿಕೊಂಡು ಒಳ್ಳೆಯ ಜೀವನ ನಡೆಸಲು ಸಹಕರಿಸುತ್ತೇವೆ. ಕೊನೆಯ ತಮ್ಮ ವಸಂತ @ ಆನಂದ 2010 ಮಾ.1 ರಂದು ನಕ್ಸಲ್ ಹೋರಾಟಕ್ಕೆ ಹೋಗಿ ಕಾರ್ಕಳದ ಮೈರೋಳಿಯಲ್ಲಿ ಪೊಲೀಸರ ಎನ್ ಕೌಂಟರ್ ಗೆ ಬಲಿಯಾಗಿದ್ದಾನೆ ಎಂದು ಸುಂದರಿಯ ಸಹೋದರ ಸುರೇಶ್ ಮಹಾ ಎಕ್ಸ್ಪ್ರೆಸ್ ವೆಬ್ ಸೈಟ್ ಗೆ ಮಾಹಿತಿ ನೀಡಿದ್ದಾರೆ.

ಸುಂದರಿ ಸೇರಿದಂತೆ ಎಲ್ಲರೂ ಮುಖ್ಯವಾಹಿನಿಗೆ ಬರುವ ಬಗ್ಗೆ ವರದಿಗಾರರು ಹೇಳಿದಾಗ ನಮಗೆ ಗೊತ್ತಾಗಿದೆ. ನಮಗೆ ನಕ್ಸಲರು ಶರಣಾಗತಿಯಾಗಿ ಅವರ ಮೇಲಿರುವ ಪ್ರಕರಣಗಳನ್ನು ಮುಗಿಸಲಿ ಎಂಬುವುದು ಆಶಯ. ಅದಲ್ಲದೆ ನಾವು ಅವರನ್ನು ಮನೆಗೆ ಸೇರಿಸಿಕೊಂಡು ಒಟ್ಟಿಗೆ ಇರುತ್ತೇವೆ. ಮುಖ್ಯವಾಹಿನಿಗೆ ಬಂದು ಮನೆ ಸೇರಿದ ಬಳಿಕ ಪೊಲೀಸರು ಸುಂದರಿಗೆ ಹಾಗೂ ಮನೆಯವರಿಗೆ ಸುಖಾಸುಮ್ಮನೆ ತನಿಖೆ ಅಂತ ಮನೆಗೆ ಬಂದು ತೊಂದರೆ ನೀಡಬಾರದು. ಹಿಂದಿನ ವರ್ಷಗಿಂತ ಈಗ ಊರು ರಸ್ತೆ ಉನ್ನತವಾಗಿ ಬೆಳೆದಿದೆ.ಇತ್ತೀಚೆಗೆ ವಿದ್ಯುತ್ ಲೈನ್ ಬಗ್ಗೆ ಮೆಸ್ಕಾಂ ಮತ್ತು ಅರಣ್ಯ ಇಲಾಖೆ ಸರ್ವೆ ನಡೆಸಿ ಹೋಗಿದ್ದಾರೆ. ಈ ನಕ್ಸಲ್ ಹೋರಾಟ ಅಂತ್ಯವಾಗಲಿ ಅಂತಾ ಸುಂದರಿಯ ಸಹೋದರ ಸುರೇಶ್ ಪತ್ನಿ ಸವಿತಾ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.